🔴ಬೇಲೂರು ಚನ್ನಕೇಶವಸ್ವಾಮಿ ದೇಗುಲ ಹುಂಡಿಗೆ 4 ತಿಂಗಳಲ್ಲಿ ₹48.67 ಲಕ್ಷ ಕಾಣಿಕೆ; ಹೊಸ ನಿಯಮದ ನಡುವೆ ಎಣಿಕೆ ಪ್ರಕ್ರಿಯೆ ಚರ್ಚೆಗೆ
ಬೇಲೂರು: ಇತಿಹಾಸ ಪ್ರಸಿದ್ಧ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಹುಂಡಿ ಎಣಿಕೆಯಲ್ಲಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ₹48,67,948 ಕಾಣಿಕೆ ಸಂಗ್ರಹವಾಗಿದೆ. ಈ ಮೊತ್ತದಲ್ಲಿ ಈ ಹಿಂದೆ ಕಳವಾಗಿದ್ದ ₹1.98 ಲಕ್ಷ ಹಣವೂ ಸೇರಿದೆ ಎಂದು ದೇಗುಲ ಮೂಲಗಳು ತಿಳಿಸಿವೆ. ನಗದು ಕಾಣಿಕೆಯ ಜೊತೆಗೆ ಸುಮಾರು 1.6 ಮಿಲಿಗ್ರಾಂ ತೂಕದ ಚಿನ್ನದ ವಸ್ತುಗಳು ಹಾಗೂ ಸಿಂಗಾಪುರ, ಮಲೇಶಿಯಾ, ಅಮೆರಿಕಾ, ಅರಬ್ ರಾಷ್ಟ್ರಗಳು ಮತ್ತು ಇಂಗ್ಲೆಂಡ್ನ ಕರೆನ್ಸಿಗಳಾದ ಡಾಲರ್, ಯೂರೋ ಸೇರಿದಂತೆ ವಿವಿಧ ದೇಶಗಳ ವಿದೇಶಿ ಕರೆನ್ಸಿಯೂ ಹುಂಡಿಯಲ್ಲಿ ದೊರೆತಿದೆ. ಈ ಎಣಿಕೆ 2026ರ ಫೆಬ್ರವರಿ 24ರಿಂದ ಜುಲೈ 8ರವರೆಗೆ ಸಂಗ್ರಹವಾದ ಕಾಣಿಕೆಗೆ ಸಂಬಂಧಿಸಿದೆ.
ಹುಂಡಿ ಎಣಿಕೆ ಕಾರ್ಯದಲ್ಲಿ ಹೆಚ್ಡಿಎಫ್ಸಿ ಬ್ಯಾಂಕಿನ 10 ಸಿಬ್ಬಂದಿ, ದೇಗುಲದ ಸಿಬ್ಬಂದಿ ಹಾಗೂ ಸರ್ವೋದಯ ಶಾಲೆಯ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು. ಭಕ್ತರ ಅಪಾರ ಕಾಣಿಕೆಯಿಂದಾಗಿ ನಾಣ್ಯ ಮತ್ತು ನೋಟುಗಳನ್ನು ಪ್ರತ್ಯೇಕಿಸಿ ಎಣಿಸುವ ಕಾರ್ಯ ಹಲವು ಗಂಟೆಗಳ ಕಾಲ ನಡೆಯಿತು.
ಇದೇ ವೇಳೆ ರಾಜ್ಯ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿರುವ ಹೊಸ ಮಾರ್ಗಸೂಚಿಯೂ ಗಮನ ಸೆಳೆದಿದೆ. ಅದರಂತೆ ದೇವಾಲಯಗಳ ಹುಂಡಿ ಎಣಿಕೆ ಕಾರ್ಯದಲ್ಲಿ ಸರ್ಕಾರಿ ಸಿಬ್ಬಂದಿ ಹೊರತುಪಡಿಸಿ ಖಾಸಗಿ ವ್ಯಕ್ತಿಗಳನ್ನು ಬಳಸಬಾರದು ಎಂದು ಸೂಚಿಸಲಾಗಿದೆ. ಆದರೆ ಮೊದಲನೇ ದರ್ಜೆಯ ದೊಡ್ಡ ದೇವಾಲಯಗಳಲ್ಲಿ ಲಕ್ಷಾಂತರ ರೂಪಾಯಿ ನಗದು ಹಾಗೂ ಅಪಾರ ಪ್ರಮಾಣದ ನಾಣ್ಯಗಳನ್ನು ಕಡಿಮೆ ಸಿಬ್ಬಂದಿಯಿಂದಲೇ ಎಣಿಸುವುದು ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿದೆ.
ಒಂದು ರೂಪಾಯಿಯಿಂದ 20 ರೂಪಾಯಿವರೆಗಿನ ನಾಣ್ಯಗಳು ಹಾಗೂ ₹5 ರಿಂದ ₹500ರವರೆಗಿನ ನೋಟುಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಎಣಿಸುವುದು ಅತ್ಯಂತ ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದೆ. ಈ ಹಿನ್ನೆಲೆಯಲ್ಲಿ ದೊಡ್ಡ ದೇವಾಲಯಗಳ ಹುಂಡಿ ಎಣಿಕೆ ಕಾರ್ಯ ಸುಗಮವಾಗಿ ನಡೆಯಲು ಅಗತ್ಯ ಸಿಬ್ಬಂದಿ ನಿಯೋಜನೆ ಹಾಗೂ ಹೊಸ ನಿಯಮಗಳ ಕುರಿತು ಸರ್ಕಾರ ಮರುಪರಿಶೀಲನೆ ನಡೆಸುವ ಅಗತ್ಯವಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ವರದಿ ಅರುಣ್ ರಾಜಪುತ್
previous post
