ಪೋಸ್ಟ್ಮಾರ್ಟಂ ಅನುಮತಿ ವಿಳಂಬ: ಸಕಲೇಶಪುರದಲ್ಲಿ 25 ವರ್ಷದ ಮಹಿಳೆಯ ಶವಸಂಸ್ಕಾರಕ್ಕೆ ಅಡ್ಡಿ — ಗ್ರಾಮಸ್ಥರ ಆಕ್ರೋಶ
ಸಕಲೇಶಪುರ:
ಸಕಲೇಶಪುರ ತಾಲೂಕಿನ ಕರಡಿಗಾಲ ಗ್ರಾಮದ ಮೋಹನ್ ಅವರ ಪತ್ನಿ ರೇಖಾ (25) ಅವರು ನಿನ್ನೆ ಸಂಜೆ ತೀವ್ರ ರಕ್ತದೊತ್ತಡ ಹೆಚ್ಚಳದಿಂದ ಉಂಟಾದ ಹೃದಯಾಘಾತದಿಂದ ಅಕಾಲಿಕವಾಗಿ ಮೃತಪಟ್ಟಿರುವ ಘಟನೆ ಗ್ರಾಮದಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ.
ಮೃತ ರೇಖಾ ಅವರ ಸಾವಿಗೆ ಸಂಬಂಧಿಸಿದಂತೆ ಪೋಸ್ಟ್ಮಾರ್ಟಂ ನಡೆಸಲು ತಾಲೂಕು ದಂಡಾಧಿಕಾರಿಗಳ ಅನುಮತಿ ಅಗತ್ಯವಿರುವುದರಿಂದ, ಬೆಳಗ್ಗೆಯಿಂದಲೇ ಕುಟುಂಬಸ್ಥರು ಸಕಲೇಶಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ್ದಾರೆ.
ಆದರೆ, ತಾಲೂಕು ದಂಡಾಧಿಕಾರಿಗಳು ಅವರು ಎಸಿ ಅವರೊಂದಿಗೆ ಸಭೆಯಲ್ಲಿ ಇರುವುದಾಗಿ ತಿಳಿಸಿ ಅನುಮತಿ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ವಿಳಂಬದಿಂದಾಗಿ ಮೃತದೇಹದ ಶವಸಂಸ್ಕಾರ ವಿಧಿ ವಿಧಾನಗಳನ್ನು ನೆರವೇರಿಸಲು ಸಾಧ್ಯವಾಗದೆ, ಊರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಕಾದು ಕುಳಿತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದರಿಂದ ಕುಟುಂಬದ ದುಃಖ ಇನ್ನಷ್ಟು ಹೆಚ್ಚಿದ್ದು, ಗ್ರಾಮಸ್ಥರಲ್ಲಿ ಆಕ್ರೋಶ ವ್ಯಕ್ತವಾಗಿದೆ.
. ತಹಸಿಲ್ದಾರರು ತಕ್ಷಣವೇ ಸಮಸ್ಯೆಗೆ ಸ್ಪಂದಿಸಬೇಕಿತ್ತು” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ಸಮಯೋಚಿತ ಸ್ಪಂದನೆ ಇಲ್ಲದಿದ್ದರೆ ಹಳ್ಳಿಯ ಜನರು ಏನು ಮಾಡಬೇಕಾಗುತ್ತದೆ ಎಂಬ ಪ್ರಶ್ನೆ ಇದೀಗ ಉದ್ಭವಿಸಿದ್ದು, ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಈ ವಿಷಯಕ್ಕೆ ತಕ್ಷಣವೇ ಗಮನಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.







