ನಲ್ಲೂಲಿ ಗ್ರಾಮ ವೃತ್ತದಲ್ಲಿ ಕೆಟ್ಟು ನಿಂತ ಹೈ ಮಾಸ್ಟ್ ಲೈಟ್: ಗ್ರಾಮಸ್ಥರ ಆಕ್ರೋಶ.
ಸಕಲೇಶಪುರ: ತಾಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಲೂಲಿ ಗ್ರಾಮದ ನಲ್ಲೂಲಿ ಗ್ರಾಮ ವೃತ್ತದಲ್ಲಿರುವ ಹೈ ಮಾಸ್ಟ್ ಲೈಟ್ ಕಳೆದ ನಾಲ್ಕೈದು ತಿಂಗಳಿಂದ ಕೆಟ್ಟು ನಿಂತಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಮದ ಪ್ರಮುಖ ವೃತ್ತವಾಗಿರುವ ಈ ಸ್ಥಳದಲ್ಲಿ ರಾತ್ರಿ ವೇಳೆ ಸಂಪೂರ್ಣ ಕತ್ತಲೆ ಆವರಿಸುವುದರಿಂದ ಪ್ರಯಾಣಿಕರು, ಪ್ರವಾಸಿಗರು ಹಾಗೂ ಸ್ಥಳೀಯ ನಿವಾಸಿಗಳು ಆತಂಕದಲ್ಲೇ ಸಂಚರಿಸುವಂತಾಗಿದೆ. ಇಲ್ಲಿ ಪ್ರವಾಸಿಗರು ಹೆಚ್ಚು ಬರುವುದರಿಂದ ವಾಹನ ಸಂಚಾರ ಹೆಚ್ಚು ಇದ್ದು, ಬೆಳಕಿನ ಕೊರತೆಯಿಂದ ಅಪಘಾತ ಸಂಭವಿಸುವ ಸಾಧ್ಯತೆಯೂ ಹೆಚ್ಚಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಗ್ರಾಮದ ಪ್ರತಾಪ್ ಅವರು ಈ ಕುರಿತು ಮಾತನಾಡಿ, “ಲೈಟ್ ಕೆಟ್ಟು ಹಲವು ತಿಂಗಳು ಕಳೆದರೂ ಸಂಬಂಧಪಟ್ಟವರು ದುರಸ್ತಿ ಮಾಡುವತ್ತ ಗಮನ ಹರಿಸಿಲ್ಲ. ಇದರಿಂದ ಗ್ರಾಮಸ್ಥರು ಮಾತ್ರವಲ್ಲ, ಈ ಮಾರ್ಗವಾಗಿ ಸಂಚರಿಸುವ ಹೊರಗ್ರಾಮದ ಜನರೂ ಸಂಕಷ್ಟ ಅನುಭವಿಸುತ್ತಿದ್ದಾರೆ,” ಎಂದು ಆರೋಪಿಸಿದ್ದಾರೆ.
ಇನ್ನೂ ಈ ಪ್ರದೇಶದಲ್ಲಿ ಕಾಡಾನೆಗಳ ಸಂಚರಣೆ ಹೆಚ್ಚಿರುವುದು ಆತಂಕಕಾರಿ ಸಂಗತಿಯಾಗಿದ್ದು, ರಾತ್ರಿ ಸಮಯದಲ್ಲಿ ಬೆಳಕಿಲ್ಲದ ಪರಿಸ್ಥಿತಿ ಜೀವಭಯವನ್ನುಂಟು ಮಾಡುತ್ತಿದೆ. ಕತ್ತಲೆಯ ಕಾರಣದಿಂದ ಆನೆಗಳ ಚಲನವಲನವನ್ನು ಗಮನಿಸಲು ಸಾಧ್ಯವಾಗದಿರುವುದು ಅಪಾಯದ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಹೀಗಾಗಿ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಕೆಟ್ಟು ನಿಂತಿರುವ ಲೈಟ್ ಅನ್ನು ದುರಸ್ತಿ ಮಾಡಿ ಸಾರ್ವಜನಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳುವ ಮುನ್ನವೇ ಅಧಿಕಾರಿಗಳು ಸ್ಪಂದಿಸಿ ಪರಿಹಾರ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಮನವಿ.
previous post
next post
