🔴ಸಾಲ ತೀರಿಸಿದರೂ ಹೆಚ್ಚುವರಿ ಹಣ ಪಾವತಿಸಲು ಒತ್ತಾಯ
🔴ಮನೆಗೆ ಜಪ್ತಿ ನೋಟಿಸ್, ಕುಟುಂಬ ಬೀದಿಗೆ; ರೈತ ಸಂಘದ ಆಕ್ರೋಶ
ಆಲೂರು
ಸಾಲವನ್ನು ತೀರಿಸಿದ್ದರೂ ಹೆಚ್ಚುವರಿ ಹಣ ಪಾವತಿಸುವಂತೆ ಒತ್ತಾಯಿಸಿ ಖಾಸಗಿ ಬ್ಯಾಂಕ್ ಸಿಬ್ಬಂದಿ ಮನೆಗೆ ಜಪ್ತಿ ನೋಟಿಸ್ ಅಂಟಿಸಿ ಬೀಗ ಹಾಕಿದ ಘಟನೆ ತಾಲೂಕಿನ ಕುಂದೂರು ಹೋಬಳಿ ವಳಗರಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿ ಸ್ಥಳೀಯರು ಹಾಗೂ ರೈತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಗ್ರಾಮದ ಪ್ರಸನ್ನ ಮತ್ತು ಉಮಾವತಿ ದಂಪತಿ 2019ರಲ್ಲಿ ಖಾಸಗಿ ಬ್ಯಾಂಕ್ನಲ್ಲಿ ಮನೆ ಅಡಮಾನ ಇಟ್ಟು 2 ಲಕ್ಷ ರೂ. ಸಾಲ ಪಡೆದಿದ್ದರು. ಇದರಲ್ಲಿ 1.80 ಲಕ್ಷ ರೂ. ಮಾತ್ರ ತಮ್ಮ ಕೈಗೆ ಬಂದಿದ್ದು, ಸಾಲವನ್ನು ಕಷ್ಟಪಟ್ಟು ತೀರಿಸಿದ್ದೇವೆ ಎಂದು ಉಮಾವತಿ ತಿಳಿಸಿದ್ದಾರೆ.
ಸಾಲ ತೀರಿಸಿದರೂ ಬ್ಯಾಂಕ್ ಸಿಬ್ಬಂದಿ ಮತ್ತೆ 3.30 ಲಕ್ಷ ರೂ. ಕಟ್ಟುವಂತೆ ಒತ್ತಾಯಿಸಿ ಹಿಂಸೆ ನೀಡುತ್ತಿದ್ದಾರೆ. ನಾವು ಅಷ್ಟು ಹಣ ಕಟ್ಟಲು ಸಾಧ್ಯವಿಲ್ಲವೆಂದಾಗ ನಾವು ಇಲ್ಲದ ವೇಳೆ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿ, ಮನೆಯ ಬೀಗ ಹಾಕಿ ಹೋಗಿದ್ದಾರೆ.
ಆ ಸಮಯದಲ್ಲಿ ನಾವು ಮಂಗಳೂರಿನಲ್ಲಿ ಚಿಕಿತ್ಸೆಗಾಗಿ ಹೋಗಿದ್ದೇವು. ಮನೆಗೆ ಬಂದಾಗ ನಮ್ಮ ಮಗಳು ಒಬ್ಬಳೇ ಇದ್ದಾಗ ಅವಳನ್ನು ಹೊರಗೆ ಕಳುಹಿಸಿ ಬೀಗ ಹಾಕಲಾಗಿದೆ ಎಂದು ಆರೋಪಿಸಿದರು.
ಬ್ಯಾಂಕ್ ಸಿಬ್ಬಂದಿ ಬಾಯಿಗೆ ಬಂದಂತೆ ಅವಮಾನಕರವಾಗಿ ಮಾತನಾಡಿ. ಕೆಲಸಕ್ಕೂ బడద రుకుళ ನೀಡುತ್ತಿರುವುದಾಗಿ
ಕುಟುಂಬಸ್ಥರು ದೂರಿದ್ದಾರೆ. ನಾವು ಕಟ್ಟಿದ ಹಣವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಮತ್ತಷ್ಟು ಹಣ ಬೇಡಿಕೆ ಇಡುತ್ತಿದ್ದಾರೆ ಎಂದು ದೂರಿದರು.
ಈ ನಡುವೆ, ಘಟನೆ ತಿಳಿದ ರೈತ ಮುಖಂಡ ಕಣಗಾಲ್ ಮೂರ್ತಿ ಸ್ಥಳಕ್ಕೆ ಆಗಮಿಸಿ ರೈತ ಸಂಘದ ಕಾರ್ಯಕರ್ತರೊಂದಿಗೆ ಮನೆ ಬೀಗ ಮುರಿದು ಕುಟುಂಬಸ್ಥರಿಗೆ ತಾತ್ಕಾಲಿಕವಾಗಿ ವಾಸ ಮಾಡಲು ವ್ಯವಸ್ಥೆ ಮಾಡಲಾಯಿತು.
ಈ ಕುರಿತು ಮಾತನಾಡಿದ ರೈತ ಸಂಘದ ಮುಖಂಡ ಕಣಗಾಲ್ ಮೂರ್ತಿ, ಬಡ ಕುಟುಂಬದ ಮೇಲೆ ಖಾಸಗಿ ಬ್ಯಾಂಕ್ ದಬ್ಬಾಳಿಕೆ ತೋರಿಸಿದೆ.
2 ಲಕ್ಷ ಸಾಲಕ್ಕೆ 3 ಲಕ್ಷಕ್ಕೂ ಹೆಚ್ಚು ಹಣ ಕೇಳುವುದು ನ್ಯಾಯವೇ? ಮನೆ ಯಜಮಾನ ಅಸ್ವಸ್ಥರಾಗಿದ್ದು, ಕುಟುಂಬ ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲೂ ಮಾನವೀಯತೆ
ತೋರದೆ ಮಹಿಳೆ ಮತ್ತು ಮಕ್ಕಳನ್ನು ಹೊರಗೆ ಹಾಕಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ, ಕುಟುಂಬ ಮನೆ ಇಲ್ಲದೆ ನೆರೆಮನೆಯ ಆಶ್ರಯಕ್ಕೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಭಾಗದಲ್ಲಿ ಆನೆಗಳ ಹಾವಳಿ ಇರುವುದರಿಂದ ರಾತ್ರಿ ಸುರಕ್ಷತೆ ಕೂಡ ಪ್ರಶ್ನೆಯಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭತಾಲೂಕು ರೈತ ಸಂಘದ ಅಧ್ಯಕ್ಷ ಕಿರಗಡಲು ಮನು, ಮುಖಂಡರಾದ ಮರ್ಕುಲಿ, ಪ್ರಕಾಶ್, ವೆಂಕಟರಾಮು, ಯತೀಶ, ಶೋಭಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.


