ದೇಶಗಳ ಯುದ್ಧದ ಪರಿಣಾಮ | ಸಿಲಿಂಡರ್ ಪೂರೈಕೆಯಲ್ಲಿ 15 ದಿನಗಳಿಂದ ಅಡಚಣೆ
ಅನಿಲದ ಕೊರತೆ; ಆಲೂರು ತಾಲೂಕಿಗೂ ತಟ್ಟಿದ ಬಿಸಿ
, ಆಲೂರು
ಮಧ್ಯಪ್ರಾಚ್ಯ ದೇಶಗಳಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮವಾಗಿ ಭಾರತದಾದ್ಯಂತ ಆಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ವೃತ್ತಯ ಉಂಟಾಗಿದೆ. ಅದರ ಬಿಸಿ ಆಲೂರು ತಾಲೂಕಿಗೂ ತಟ್ಟಿದೆ. ನೂರಾರು ಗ್ರಾಹಕರು ಅಡುಗೆ ಅನಿಲ ಸಿಲಿಂಡರ್ ಪಡೆಯಲು ಗ್ಯಾಸ್ ವಿತರಣಾ ಏಜೆನ್ಸಿಗಳ ಕಚೇರಿ ಮತ್ತು ಗೋದಾಮುಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ಪರದಾಡುತ್ತಿದ್ದರೆ ಮತ್ತೊಂದೆಡೆ ತಾಲೂಕಿನ ವಿವಿಧ ಹೋಟೆಲ್ಗಲ್ಲಿ ಅಡುಗೆ ಅನಿಲ ಕೊರತೆಯಿಂದ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಸಾವಿರಾರು ಕಿಮೀ ದೂರದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಭಾರತದಲ್ಲಿ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿಯೂ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಜನಸಾಮಾನ್ಯರು ಅವಲಂಭಿತವಾಗಿರುವ ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಕಳೆದ 15 ದಿನಗಳಿಂದ ಗಂಭೀರ ಆಡಚಣೆ ಕಂಡುಬಂದಿದೆ.
ಭಾರತ ತನ್ನ ಅಗತ್ಯದ ಶೇಕಡಾ 60ರಿಂದ 80 ಎಲ್ ಪಿಜಿ ಅನಿಲವನ್ನು ಸೌದಿ ಆರೇಬಿಯಾ, ಯುಎಇ ಮತ್ತು ಕತಾರ್ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಇರಾನ್, ಇಸ್ರೇಲ್ ಯುದ್ಧದ ಹಿನ್ನೆಲೆ ಹಾರ್ಮುದ ಜಲಸಂಧಿ ಮಾರ್ಗದಲ್ಲಿ ಹಡಗುಗಳ ಸಂಚಾರಕ್ಕೆ ಅಪಾಯ ಅಡಚಣೆ ಎದುರಾಗಿರುವ ಹಿನ್ನೆಲೆಯಲ್ಲಿ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಜನಸಾಮಾನ್ಯರಲ್ಲಿ ಆತಂಕ ಹೆಚ್ಚಾಗಿದ್ದು, ಭವಿಷ್ಯದಲ್ಲಿ ಕೊರತೆ ಉಂಟಾಗಬಹುದು ಎಂಬ ಭೀತಿಯಿಂದ ಬುಕ್ಕಿಂಗ್ಗೆ ಮುಂದಾಗುತ್ತಿರುವುದು ಹೆಚ್ಚಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆ ಎಲ್ ಪಿಜಿ ದರದಲ್ಲೂ ಏರಿಕೆಯಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕೋವಿಡ್ ಅವಧಿಯಂತೆಯೇ ಪರಿಸ್ಥಿತಿ ಮರುಕಳಿಸಬಹುದೇ ಎಂಬ ಆತಂಕವೂ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.
ಸರ್ಕಾರವು ಮನೆ ಬಳಕೆಯ ಸಿಲಿಂಡರ್ಗಳಿಗೆ ಆದ್ಯತೆ
ನೀಡುತ್ತಿದ್ದು, ಪೂರೈಕೆಯನ್ನು ಸಮತೋಲನಗೊಳಿಸಲು ಕ್ರಮ ಕೈಗೊಳ್ಳುತ್ತಿದೆ. ಭಾರತವು ಅರ್ಜೆಂಟೀನಾ ಹಾಗೂ ಅಮೆರಿಕದಂತಹ ದೇಶಗಳಿಂದ ಎಲ್ಪಿಜಿ ಆಮದು ಮಾಡಲು ಮುಂದಾಗಿದೆ. ಪೆಟ್ರೋಲಿಯಂ ಕಂಪನಿಗಳು ದೇಶದಲ್ಲಿ ಸಾಕಷ್ಟು ದಾಸ್ತಾನು ಇದೆ ಎಂದು ಭರವಸೆ ನೀಡುತ್ತಿದ್ದರೂ, ಯುದ್ಧ ದೀರ್ಘಕಾಲ ಮುಂದುವರಿದರೆ ಪರಿಸ್ಥಿತಿ ಬಿಗಡಾಯಿಸುವ ಆತಂಕ ವ್ಯಕ್ತವಾಗಿದೆ.
ಏಜೆನ್ಸಿಯ ಮುಖ್ಯಸ್ಥ ಮಂಜುನಾಥ್ ಮಾಧ್ಯಮದ ಜೊತೆ ಮಾತನಾಡಿ, ನಾವು ಇಲ್ಲಿಯವರೆಗೂ ನಮ್ಮ ತಾಲೂಕಿನಲ್ಲಿ ಎಷ್ಟು ಪ್ರಮಾಣದಲ್ಲಿ ಪ್ರತಿದಿನ ಬುಕ್ಕಿಂಗ್ ಆಗುತ್ತಿತ್ತೋ ಅಷ್ಟು ಪ್ರಮಾಣದಲ್ಲಿ ಅಡುಗೆ ಅನಿಲದ ಸಿಲಿಂಡರ್ ಗಳನ್ನು ಪ್ರತಿದಿನ ಹತ್ತಾರು ವಾಹನಗಳ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಾಲೂಕಿನಾದ್ಯಂತ ತಲುಪಿಸುತ್ತಿದ್ದೆವು ಆದರೆ ಯುದ್ಧದ ಪರಿಣಾಮದಿಂದಾಗಿ ಸ್ವಲ್ಪ ಗಲಿಬಿಲಿಯಾಗಿದೆ ಮುಂದಿನ ದಿನಗಳಲ್ಲಿ ಸಮರ್ಪಕವಾಗಿ ಗ್ಯಾಸ್ ಅನ್ನು ತಲುಪಿಸುತ್ತೇವೆ ಎಂದು ಮಾತನಾಡಿದರು.
ಈಗಾಗಲೇ ತಾಲೂಕಿಗೆ ಗ್ಯಾಸ್ ಕಚೇರಿಗೆ ಕರೆಯಿಸಿ ಕಟ್ಟುನಿಟ್ಟಿನ ನಿರ್ದೇಶ ನೀಡಲಾಗಿದೆ. ಆಡುಗೆ ಅನಿಲದ ಸಿಲಿಂಡರನ್ನು ಆಕ್ರಮವಾಗಿ ಸಂಗ್ರಹಿಸುವವರ ವಿರುದ್ಧ ಹಾಗೂ ಗೃಹಬಳಕೆಯ ಸಿಲಿಂಡರ್ಗಳನ್ನು ವಾಣಿಜ್ಯ ಬಳಕೆಗೆ ಬಳಸುತ್ತಿದ್ದರೆ ಅಂತಹ ಸಿಲಿಂಡರ್ ಗಳನ್ನು ವಶಕ್ಕೆ ಪಡೆದು ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.
*ಎಚ್. ಮಲ್ಲಿಕಾರ್ಜುನ್ ತಹಸೀಲ್ದಾರ್
ಯುದ್ಧ ಪ್ರಾರಂಭವಾದಗಿನಿಂದ ಅನಿಲ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಪ್ರತಿನಿತ್ಯ 600-700 ಸಿಲಿಂಡರ್ ಬುಕ್ಕಿಂಗ್ ಆಗುತ್ತಿದ್ದು ಪ್ರಸ್ತುತ ನಮಗೆ 300-340 ಸಿಲಿಂಡರ್ ಮಾತ್ರ ಪೂರೈಕೆಯಾಗುತ್ತಿದೆ ಅವುಗಳನ್ನು ಪ್ರಾಮಾಣಿಕವಾಗಿ ಗ್ರಾಹಕರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದೇವೆ ಎಂದರು.



