ಶಾಲೆ ಮುಂಭಾಗ ರಸ್ತೆಯಲ್ಲಿ ಮರಳು–ಜೆಲ್ಲಿ ರಾಶಿ: ವಾಹನ ಸಂಚಾರಕ್ಕೆ ಅಡಚಣೆ, ಅಪಾಯದ ಭೀತಿ.
ಸಕಲೇಶಪುರದ 16ನೇ ವಾರ್ಡ್ ನ ಲಕ್ಷ್ಮೀಪುರ ಬಡಾವಣೆಯಲ್ಲಿರುವ ಪಯೋನಿಯರ್ ಪಬ್ಲಿಕ್ ಸ್ಕೂಲ್ ಮುಂಭಾಗದ ರಸ್ತೆಯಲ್ಲಿ ನಿರ್ಮಾಣ ಕಾಮಗಾರಿಗಳಿಗಾಗಿ ಮಧ್ಯ ರಸ್ತೆಯಲ್ಲೇ ಮರಳು ಹಾಗೂ ಜೆಲ್ಲಿ ಹಾಕಿರುವುದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ. ಈ ರಸ್ತೆಯನ್ನು ದಿನನಿತ್ಯವಾಗಿ ಬಳಸುವ ವಾಹನ ಸವಾರರು, ಶಾಲಾ ಮಕ್ಕಳು ಹಾಗೂ ಸ್ಥಳೀಯರು ಭಾರೀ ಸಮಸ್ಯೆ ಎದುರಿಸುತ್ತಿದ್ದಾರೆ.
ರಸ್ತೆಯ ಅಕ್ಕಪಕ್ಕ ಮನೆ ಹಾಗೂ ಶಾಲೆ ಕಟ್ಟುವ ಕೆಲಸಗಳು ನಡೆಯುತ್ತಿರುವ ಹಿನ್ನೆಲೆ, ನಿರ್ಮಾಣ ಸಾಮಗ್ರಿಗಳನ್ನು ಸರಿಯಾದ ಸ್ಥಳದಲ್ಲಿ ಇಡುವ ಬದಲು ನೇರವಾಗಿ ರಸ್ತೆಯ ಮಧ್ಯ ಭಾಗದಲ್ಲೇ ರಾಶಿಯಾಗಿ ಹಾಕಲಾಗಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ದ್ವಿಚಕ್ರ ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ವಿಶೇಷವಾಗಿ ಸಣ್ಣ ವಾಹನಗಳು ಹಾಗೂ ಸೈಕಲ್ ಸವಾರರು ಈ ಭಾಗದಲ್ಲಿ ಜಾರಿ ಬೀಳುವ ಸಾಧ್ಯತೆ ಹೆಚ್ಚಾಗಿದೆ.
ರಾತ್ರಿ ಸಮಯದಲ್ಲಿ ಬೆಳಕಿನ ಕೊರತೆಯಿಂದ ಸಮಸ್ಯೆ ಇನ್ನಷ್ಟು ಗಂಭೀರವಾಗುತ್ತದೆ. ಶಾಲೆಯ ಮಕ್ಕಳು ಸೈಕಲ್ನಲ್ಲಿ ಆಟವಾಡುವ ವೇಳೆ ಅಥವಾ ಮನೆಗೆ ತೆರಳುವಾಗ ಮರಳು–ಜೆಲ್ಲಿ ಮೇಲೆ ಸೈಕಲ್ ಜಾರಿ ಬಿದ್ದು ಗಾಯವಾಗುವ ಅಪಾಯ ಎದುರಿಸುತ್ತಿದ್ದಾರೆ. ಈಗಾಗಲೇ ಕೆಲವು ಸಣ್ಣಪುಟ್ಟ ಅಪಘಾತಗಳು ಸಂಭವಿಸಿರುವುದಾಗಿ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಾರ್ವಜನಿಕ ಕಾಮಗಾರಿಗಳ ಇಲಾಖೆ ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ರಸ್ತೆ ಮಧ್ಯದಲ್ಲಿರುವ ಮರಳು ಮತ್ತು ಜೆಲ್ಲಿ ತೆರವುಗೊಳಿಸಿ, ಸುರಕ್ಷಿತ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಲಕ್ಷ್ಮೀಪುರ ಬಡಾವಣೆಯ ನಿವಾಸಿಗಳು ಆಗ್ರಹಿಸಿದ್ದಾರೆ.
previous post
next post
