ಆಲೂರು: ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ತಾಲೂಕು ಆಡಳಿತ ವತಿಯಿಂದ ಸೋಮವಾರ ಸಡಗರ, ಸಂಭ್ರಮ ಹಾಗೂ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.
ಪಟ್ಟಣದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ತಹಶೀಲ್ದಾರ್ ಮಲ್ಲಿಕಾರ್ಜುನ್ ಹಾಗೂ ಗಣ್ಯರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಗೌರವ ಸಲ್ಲಿಸಿದರು.
ಬಳಿಕ ಮಾತನಾಡಿದ ತಹಸಿಲ್ದಾರ್ ಮಲ್ಲಿಕಾರ್ಜುನ್ ಮಹಾ ಪುರುಷರ ಜಯಂತಿ ಆಚರಣೆಯ ಉದ್ದೇಶ ಅವರ ತತ್ವ ಸಂದೇಶ, ಆದರ್ಶ ನಮ್ಮ ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಸುಧಾರಣೆ ತರಬೇಕೆನ್ನುವುದು. ಅದರಿಂದ ನಮಗೆ ಪ್ರೇರಣೆ, ಸ್ಫೂರ್ತಿ ಸಿಗಬೇಕೆನ್ನುವುದು ಎಂದ ಅವರು. ಈ ಜಗತ್ತಿನ ವಿಸ್ಮಯ ವಿಶ್ವಗುರು ಬಸವಣ್ಣ. ಸಮಾನತೆ ಇರಲಿಲ್ಲ, ಸ್ತ್ರೀಯರಿಗೆ ಸ್ವಾತಂತ್ರ್ಯ ಇರಲಿಲ್ಲ. ಮೌಢ್ಯ, ಅನ್ಯಾಯ, ಕಂದಾಚಾರ, ವರ್ಣಭೇದ, ವರ್ಗಭೇದ ಇತ್ತು. ಅಂಥ ಸಂದರ್ಭದಲ್ಲಿ ಸಮಾಜದ ಅನಿಷ್ಠ ನಿರ್ಮೂಲನೆಗೆ ಶ್ರಮಿಸಿ ಸಮಾಜೋ ಧಾರ್ಮಿಕ ಕ್ರಾಂತಿ ಮಾಡಿದವರು ಬಸವಣ್ಣ. ಹೆಣ್ಣು, ಹೊನ್ನು, ಮಣ್ಣಿಗಾಗಿ ಜಗತ್ತಿನಲ್ಲಿ ಅನೇಕ ಕ್ರಾಂತಿಗಳು ನಡೆದಿವೆ. ಆದರೆ, ಸಮಾನತೆಗಾಗಿ ಈ ನೆಲದಲ್ಲಿ ನಡೆದದ್ದು ಕಲ್ಯಾಣ ಕ್ರಾಂತಿ ಎಂದು ಹೇಳಿದರು.
ಮುಖ್ಯ ಭಾಷಣಕಾರರಾಗಿ ಶಿಕ್ಷಕ ಇಂದ್ರೇಶ್ ಮಾತನಾಡಿ, ಸಮಾನತೆ, ಕಾಯಕ, ದಾಸೋಹ, ಭಾತೃತ್ವ ತತ್ವ ನೀಡಿ ಸಮ ಸಮಾಜ ನಿರ್ಮಿಸಿದ್ದರು. ಜಗತ್ತಿನ ಪ್ರಥಮ ಸಂಸತ್ತು ಅನುಭವ ಮಂಟಪ ಕಟ್ಟಿ, ಕಾಯಕ, ದಾಸೋಹ ತತ್ವ ಕೊಟ್ಟರು. ಅನುಭವ ಮಂಟಪದಲ್ಲಿ ಮಹಿಳೆಯರಿಗೂ ಸಮಾನ ಅವಕಾಶಗಳನ್ನು ಕೊಟ್ಟರು. ಇಡೀ ಜಗತ್ತಿಗೆ ಸಾಮಾಜಿಕ ನ್ಯಾಯ ಕೊಟ್ಟ ಧರ್ಮ ಲಿಂಗಾಯತ. ಬಸವಾದಿ ಶರಣರ ವಿಚಾರಗಳನ್ನು ನಮ್ಮ ಸಂವಿಧಾನದಲ್ಲಿ ಇದೆ. ವಿಶ್ವಸಂಸ್ಥೆಯಲ್ಲಿ ಕೂಡ ಬಸವತತ್ವ ಇದೆ. ಇಷ್ಟಾದರೂ ಅಸೂಯೆ, ಹಿಂಸೆ, ದ್ವೇಷ ಸಮಾಜದಲ್ಲಿದೆ. ಬಸವತತ್ವದಲ್ಲಿ ಎಲ್ಲವೂ ಇದೆ. ನಮ್ಮ ಯುವಕ ಯುವತಿಯರಿಗೆ ಅದರ ಅರಿವಿಲ್ಲ. ವಚನ ಸಾಹಿತ್ಯದ ಮಹತ್ವ ತಿಳಿಸಿ, ಉತ್ತಮ, ಸುಂದರ ಸಮಾಜ ನಿರ್ಮಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವೀರಶೈವ ಸಂಘದ ಅಧ್ಯಕ್ಷ ರೇಣುಕ ಪ್ರಸಾದ್, ಉಪಾಧ್ಯಕ್ಷ ಡಿಎಸ್ ಜಯಣ್ಣ, ಖಜಾಂಚಿ ಟೀಕರಾಜು, ಅಖಿಲ ಭಾರತ ವೀರಶೈವ ಸಂಘದ ಅಧ್ಯಕ್ಷ ಅಜಿತ್, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಮಂಜುನಾಥ್, ಬಿಇಓ ಕೃಷ್ಣೇಗೌಡ, ಶಿರಸ್ಥೆದಾರ್ ಅಂಕೆಗೌಡ ಸೇರಿದಂತೆ ಮುಂತಾದವರು ಹಾಜರಿದ್ದರು.
previous post
next post
