🔴ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳ ವಿತರಣೆ: ವಿವೇಕ್–ಶಿವಾನಿ ದಂಪತಿಗಳ ಸೇವೆಗೆ ಮೆಚ್ಚುಗೆ.
ಸಕಲೇಶಪುರ :- ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಅತ್ತಿಹಳ್ಳಿಯ ವಿವೇಕ್ ಹಾಗೂ ಶ್ರೀಮತಿ ಶಿವಾನಿ ದಂಪತಿಗಳು ಮತ್ತು ಅವರ ಮಂಗಳೂರಿನ ಸ್ನೇಹಿತರ ಬಳಗದ ವತಿಯಿಂದ ತಾಲೂಕಿನ ವಿವಿಧ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಿ ಮಾದರಿ ಸೇವೆ ಸಲ್ಲಿಸಿದ್ದಾರೆ.
ಅತ್ತಿಹಳ್ಳಿ, ಬ್ಯಾಗಡಹಳ್ಳಿ, ವನಗೂರು, ತಂಬಲಗೇರಿ, ಹುಲಗತ್ತೂರು, ಹಾಡ್ಯ, ಹಾಡ್ಲಹಳ್ಳಿ, ಯಡಕೇರಿ, ಕೊಣಬನಹಳ್ಳಿ, ಹೆಚ್.ವಿ.ಹಳ್ಳಿ, ಉಮ್ಮತ್ತೂರು, ಆದ್ರಿಗೇರಿ ಹಾಗೂ ಚಿನ್ನಳ್ಳಿ ಸೇರಿದಂತೆ ಒಟ್ಟು 14 ಸರ್ಕಾರಿ ಶಾಲೆಗಳ ಸುಮಾರು 120 ವಿದ್ಯಾರ್ಥಿಗಳಿಗೆ ಕಂಪಾಸ್, ನೋಟ್ ಪುಸ್ತಕಗಳು, ವಾಟರ್ ಬಾಟಲ್, ಪೆನ್ನು, ಪೆನ್ಸಿಲ್, ಮಗ್ಗಿ ಪುಸ್ತಕ, ಡ್ರಾಯಿಂಗ್ ಬುಕ್, ಪೇಂಟ್ ಬಾಕ್ಸ್, ಕ್ರೆಯಾನ್ಸ್, ಕಥೆ ಪುಸ್ತಕ ಸೇರಿದಂತೆ ವಿವಿಧ ಶೈಕ್ಷಣಿಕ ಉಪಯೋಗದ ವಸ್ತುಗಳನ್ನು ಉಡುಗೊರೆಯಾಗಿ ನೀಡಲಾಯಿತು.
ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಅಗತ್ಯವಾದ ಕಲಿಕಾ ಸಾಮಗ್ರಿಗಳನ್ನು ಒದಗಿಸುವ ಮೂಲಕ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸುವ ಹಾಗೂ ಶಿಕ್ಷಣದ ಕಡೆಗೆ ಹೆಚ್ಚಿನ ಆಸಕ್ತಿ ಮೂಡಿಸುವ ಕಾರ್ಯವನ್ನು ಸ್ನೇಹಿತರ ಬಳಗ ಮಾಡಿದೆ ಎಂದು ಶಿಕ್ಷಕರು ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಸರ್ಕಾರಿ ಶಾಲೆಗಳ ಶ್ರೇಯೋಭಿವೃದ್ಧಿಗಾಗಿ ಸಹಕರಿಸಿದ ವಿವೇಕ್, ಶ್ರೀಮತಿ ಶಿವಾನಿ ಹಾಗೂ ಮಂಗಳೂರಿನ ಸ್ನೇಹಿತರ ಬಳಗದ ನಿಸ್ವಾರ್ಥ ಸೇವೆಗೆ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರ ಪರವಾಗಿ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.
ಸಮಾಜದ ಒಳಿತಿಗಾಗಿ ಇಂತಹ ಸೇವಾ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿ ಎಂದು ಶಾಲಾ ಶಿಕ್ಷಕರು ಆಶಿಸಿದರು.

