ಆಲೂರು ತಾಲೋಕ್ ನ್ನು ಬರ ಪಟ್ಟಿ ಕೈಬಿಟ್ಟಿದ್ದಕ್ಕೆಜಯಣ್ಣ ಹೈದುರ್ ಆಕ್ರೋಶ
ಆಲೂರು.ತಾಲೂಕಿನಲ್ಲಿ ಮಳೆ ಕೊರತೆಯಿಂದ ಬೆಳೆಗಳು ನಾಶವಾಗಿ ರೈತರು ಸಂಕಷ್ಟದಲ್ಲಿದ್ದರೂ ಆಲೂರು ತಾಲೂಕನ್ನು ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ರಾಜ್ಯ ಸರ್ಕಾರ ಕೈಬಿಟ್ಟಿರುವುದು ಖಂಡನೀಯ ಎಂದು ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಜಯಣ್ಣ ಹೈದುರ್ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಕೃಷಿ ಚಟುವಟಿಕೆ ಕುಂಠಿತಗೊಂಡಿವೆ. ಮೆಕ್ಕೆಜೋಳದ ಬೆಳೆ ಬಿಳಿ ಸುಳಿ ರೋಗದಿಂದ ನಾಶವಾಗಿದ್ದು, ಭತ್ತದ ಕೃಷಿಗೂ ಹಿನ್ನಡೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಲೂರು ತಾಲೂಕನ್ನು ಬರಪೀಡಿತ ಎಂದು ಘೋಷಿಸಿ ರೈತರಿಗೆ ಪರಿಹಾರ ನೀಡಬೇಕಿದ್ದ ಸರ್ಕಾರ, ಬರಪೀಡಿತ ಪಟ್ಟಿಯಿಂದ ಕೈಬಿಟ್ಟು ಅನ್ಯಾಯ ಮಾಡಿದೆ. ಸರ್ಕಾರ ಕೂಡಲೇ ತನ್ನ ನಿರ್ಧಾರವನ್ನು ಮರುಪರಿಶೀಲಿಸಿ, ಅಧಿಕಾರಿಗಳ ತಂಡವನ್ನು ತಾಲೂಕಿಗೆ ಕಳುಹಿಸಿ ಮರು ಸಮೀಕ್ಷೆ ನಡೆಸಬೇಕು. ಬಳಿಕ ಆಲೂರು ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸಬೇಕೆಂದು ಒತ್ತಾಯಿಸಿದರು.
ಸರ್ಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ರೈತರು, ರೈತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಹಾಗೂ ಸಾರ್ವಜನಿಕರನ್ನು ಸಂಘಟಿಸಿ ತಾಲೂಕಿನಾದ್ಯಂತ ಉಗ್ರ ಹೋರಾಟ ಮತ್ತು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬರ ಪರಿಸ್ಥಿತಿ ಉಂಟಾದಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಸ್ಡಿಆರ್ಎಫ್ ಹಾಗೂ ಎನ್ಡಿಆರ್ ಎಫ್ ಮಾರ್ಗಸೂಚಿಗಳ ಅನ್ವಯ ಪರಿಹಾರ ವಿತರಿಸುತ್ತವೆ. ಆದರೆ ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳು
ಹಳೆಯದಾಗಿದ್ದು, ಇಂದಿನ ವಾಸ್ತವ ಪರಿಸ್ಥಿತಿಗೆ ಹೊಂದಿಕೆಯಾಗುತ್ತಿಲ್ಲ.
ಎನ್ ಡಿಆರ್ ಎಫ್ ಹಾಗೂ
ಎಸ್ಡಿಆರ್ ಎಫ್
ನಿಯಮಗಳಡಿ ನಿಗದಿಪಡಿಸಿರುವ ಬೆಳೆಹಾನಿ ಪರಿಹಾರದ ಮೊತ್ತವೂ ಕಡಿಮೆಯಾಗಿದೆ. ಗೊಬ್ಬರ, ಬೀಜ ಹಾಗೂ ಕೂಲಿ ವೆಚ್ಚಗಳು ದುಪ್ಪಟ್ಟಾಗಿರುವ ಸಂದರ್ಭದಲ್ಲಿ ಸರ್ಕಾರ ನೀಡುವ ಪರಿಹಾರವು ರೈತರ ಸಾಲದ ಬಡ್ಡಿಗೂ ಸಾಲುವುದಿಲ್ಲ. ಆದ್ದರಿಂದ ಪರಿಹಾರ ನಿಯಮಗಳನ್ನು ತಕ್ಷಣ ಪರಿಷ್ಕರಿಸಬೇಕೆಂದು ಆಗ್ರಹಿಸಿದರು.
ಮಳೆಯಾಗದೆ ಬೆಳೆ ಕೈಗೆ ಸಿಗದೆ ರೈತರು ಸಂಕಷ್ಟದಲ್ಲಿರುವಾಗ ಬ್ಯಾಂಕ್ಗಳು ಹಾಗೂ ಸಹಕಾರ ಸಂಘಗಳು ಸಾಲ ಮರುಪಾವತಿಸುವಂತೆ ನೋಟಿಸ್ ನೀಡುತ್ತಿವೆ. ರೈತರು ಸಾಲ ತೀರಿಸುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಸರ್ಕಾರ ಮಧ್ಯಪ್ರವೇಶಿಸಿ ಬ್ಯಾಂಕ್ಗಳ ಬಲವಂತದ ಸಾಲ ವಸೂಲಾತಿ ತಡೆಹಿಡಿಯಬೇಕು. ಉಳುಮೆ ಹಾಗೂ ಬೆಳೆಗಾಗಿ ರೈತರು ಪಡೆದಿರುವ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಇಲ್ಲದೆ ಹೋದರೆ ಸರ್ಕಾರದ ವಿರುದ್ಧ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಮಾತನಾಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಕರವೇ ಉಪಾಧ್ಯಕ್ಷ ನವೀನ್ ಬೈರಾಪುರ. ರೈತ ಸಂಘದ ಮುಖಂಡರುಗಳು. ಭೀಮ್ ಆರ್ಮಿ ಸಂಚಾಲಕ ಪ್ರತಾಪ್. ಎಲ್ಲ ಪ್ರಗತಿಪರ ಸಂಘ ಸಂಸ್ಥೆಗಳು ಇದ್ದರು.
previous post
