ಆಲೂರು: ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಮಳೆ ಹಾಗೂ ಬೀಸುತ್ತಿರುವ ಗಾಳಿಗೆ ರಸ್ತೆ ಬದಿಯ ಮರಗಳು, ಕೊಂಬೆಗಳು ಧರೆಗುರುಳುತ್ತಿದ್ದು, ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದೆ.
ತಾಲ್ಲೂಕಿನಲ್ಲಿ ಪ್ರತಿ ಬಾರಿ ರಭಸವಾದ ಮಳೆ, ಗಾಳಿಗೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿ ಸಾಕಷ್ಟು ಅನಾಹುತ ಸೃಷ್ಟಿಸುತ್ತಿವೆ. ವಾಹನಗಳ ಮೇಲೆ ಬಿದ್ದು ಅಪಾರ ನಷ್ಟ ಉಂಟು ಮಾಡುತ್ತಿವೆ. ಸಂಚರಿಸುವ ವಾಹನಗಳ ಮೇಲೆ ಬಿದ್ದ ನಿದರ್ಶನಗಳಿವೆ. ಅಪಾಯ ಉಂಟು ಮಾಡಬಹುದಾದ ಮರಗಳ ತೆರವಿಗೆ ಅರಣ್ಯ ಇಲಾಖೆ ಮುಂದಾಗಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ
ತಾಲ್ಲೂಕಿನ ದೇವರಾಜಪುರ ಗ್ರಾಮದ ರಾಜ್ಯ ರಸ್ತೆಯ ಸಮೀಪದ ಲಕ್ಕಮ್ಮ ರವರ ಮನೆಯ ಮೇಲೆ ಎರಡು ಮರ ಬಿದ್ದು ಮನೆಯು ಜಕಾಂ ಗೊಂಡು ಇಬ್ಬರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮುಂಗಾರಿನ ಪ್ರಾರಂಭದಲ್ಲಿ ಲಕ್ಷ್ಮೀಪುರ ಭಾಗದಲ್ಲಿ ಬೃಹತ್ ಮರ ಬಿದ್ದು ಸಂಚಾರ ಅಸ್ತವ್ಯಸ್ತವಾಗಿತ್ತು. ಅಲ್ಲದೆ ಕಾರ್ಜುವಳ್ಳಿ ರಸ್ತೆಯ ಪಕ್ಕದಲ್ಲಿದ್ದ ಮರಗಳು ನೆಲಕ್ಕುರುಳಿದ್ದವು.
ರಸ್ತೆ ಅಂಚಿನ ಅಕೇಶಿಯಾ ಮರಗಳು ಬುಡಮೇಲಾಗುತ್ತಿವೆ. ಹಲವೆಡೆ ವಿದ್ಯುತ್ ತಂತಿಗಳು ಹರಿದು, ಕಂಬಗಳು ಧರೆಗುರುಳಿ ಅನಾಹುತ ಸೃಷ್ಟಿಸುತ್ತಿವೆ.ಕೂಡಲೇ ಎಚ್ಚೆತ್ತು, ರಸ್ತೆಬದಿ ಒಣಗಿರುವ, ರಸ್ತೆಗೆ ಚಾಚಿಕೊಂಡಿರುವ, ವಿದ್ಯುತ್ ತಂತಿಗೆ ಚಾಚಿಕೊಂಡಿರುವ ಮರ ಹಾಗೂ ಕೊಂಬೆಗಳ ತೆರವಿಗೆ ಅರಣ್ಯ ಇಲಾಖೆ ಮುಂದಾಗಬೇಕು.
ಆಲೂರು _ ಬಿಕ್ಕೋಡು ಮಾರ್ಗದ ರಸ್ತೆಯಲ್ಲಿ ಮರದ ಕೊಂಬೆಗಳು ರಸ್ತೆಗೆ ಚಾಚಿಕೊಂಡಿವೆ. ವಿದ್ಯುತ್ ತಂತಿಗೂ ಅವು ತಗುಲಿವೆ. ಅನಾಹುತ ಸಂಭವಿಸುವ ಮುನ್ನ ಕತ್ತರಿಸಬೇಕಿದೆ’ದೇವರಾಜಪುರ ಗ್ರಾಮದ ನಿವಾಸಿ ದೇವರಾಜು ಕೋರುತ್ತಾರೆ.ಬೇಸಿಗೆಯಲ್ಲೇ ಈ ಮರಗಳು ಬೀಳುವ ಸ್ಥಿತಿ ತಲುಪಿವೆ. ಮಳೆ ಪ್ರಾರಂಭವಾದರೆ ಗಾಳಿ ಮಳೆಗೆ ಮರಗಳು ಬೀಳುವುದಂತೂ ಖಚಿತ. ಈ ಮರಗಳು ರಸ್ತೆಯಲ್ಲಿ ವಾಹನ ಸಂಚರಿಸುವಾಗ ಬಿದ್ದು ಜೀವಹಾನಿ, ನಷ್ಟ ಸಂಭವಿಸುವ ಮುನ್ನ ಸಂಬಂಧಪಟ್ಟವರು ಇತ್ತ ಗಮನಿಸಬೇಕಿದೆ,ಎಂದು ಗ್ರಾಮದ ನಿವಾಸಿ ಗೌರಮ್ಮ ಆಗ್ರಹಿಸಿದ್ದಾರೆ“` .


