ದಶಕಗಳು ಕಳೆದರು ತಾಲ್ಲೂಕಿನ ಗಡಿ ಭಾಗದ ಗ್ರಾಮಕ್ಕಿಲ್ಲ ರಸ್ತೆ ವ್ಯವಸ್ಥೆ. ರಸ್ತೆ ಕಲ್ಪಿಸಿ ಕೊಡುವಂತೆ ಗ್ರಾಮಸ್ಥರ ಆಗ್ರಹ.:-
ಸಕಲೇಶಪುರ:- ಎತ್ತಿನಹೊಳೆ ಯೋಜನೆಯಲ್ಲಿ ನಿರ್ಮಾಣವಾಗಬೇಕಿದ್ದ ರಸ್ತೆಯನ್ನು ಜನಪ್ರತಿನಿಧಿಗಳು ಗ್ರಾಮಕ್ಕೆ ಮಾಡಿಕೊಡಲು ಮನಸ್ಸು ಮಾಡದೆ ಗುಂಡಿ ಬಿದ್ದಿರುವ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಮಂದಿ ಗ್ರಾಮಸ್ಥರು,ಪ್ರಯಾಣಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಸಂಚರಿಸುವ ಪರಿಸ್ಥಿತಿಯಾಗಿದೆ. ತಾಲ್ಲೂಕಿನ ಗಡಿ ಭಾಗದ ನಮ್ಮ ಗ್ರಾಮಗಳನ್ನು ಚುನಾವಣೆ ಸಮಯದಲ್ಲಿ ಪರಿಗಣನೆಗೆ ತೆಗೆದುಕೊಂಡು ಅಭಿವೃದ್ಧಿ ಎಂಬ ಮಾತು ಬಂದಾಗ ಕೈ ಬಿಡುವುದು ಎಷ್ಟು ಸರಿ ಎಂದು ಕಳಲೆ ಗ್ರಾಮಸ್ಥರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನ ಯಸಳೂರು ಹೋಬಳಿಯ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಲೆ ಗ್ರಾಮದ ಮುಖ್ಯರಸ್ತೆಯಿಂದ ಕೆ.ಟಿ ರಾಮೇಗೌಡರ ಮನೆಯಿಂದ ಕೆ.ಪಿ ರಂಜಿತ್ ಮನೆಯವರೆಗಿನ ಸುಮಾರು 250 ಮೀಟರ್ ರಸ್ತೆ ತುಂಬಾ ಹದಗೆಟ್ಟಿದ್ದು. ಪ್ರತಿನಿತ್ಯ ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು, ತೋಟ ಗದ್ದೆಗಳಿಗೆ ಹೋಗಿಬರುವ ರೈತರು ಹರಸಾಹಸ ಪಡುವಂತ ಪರಿಸ್ಥಿತಿ ಎದುರಾಗುತ್ತದೆ. ಇನ್ನೂ ಮಳೆಗಾಲದ ಸಮಯದಲ್ಲಿ ರಸ್ತೆ ತುಂಬಿಲ್ಲ ಗುಂಡಿಗಳಿಗೆ ನೀರು ತುಂಬಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ.ಬೇಸಿಗೆ ಕಾಲದಲ್ಲಿ ಗುಂಡಿಗಳು ಹಾಗೂ ರಸ್ತೆಯ ಉಬ್ಬಗಳಿಂದ ಬೈಕು ಸವಾರರು, ಕೆಲವು ಸಮಯ ಆಂಬುಲೆನ್ಸ್ ಗಳು ಈ ರಸ್ತೆಯಲ್ಲಿ ಹೋಗುವುದಕ್ಕೆ ಪರದಾಡಬೇಕಾಗುತ್ತದೆ.ಈ ರಸ್ತೆಯು ಕಳಲೆ ಗ್ರಾಮದ ಸುಮಾರು 50 ಮನೆಗಳಿಗೆ ಸಂಪರ್ಕ ಕಲ್ಪಿಸುವುದರ ಜೊತೆಗೆ ಪಕ್ಕದ ಗ್ರಾಮಗಳಾದ ಶಾನಹಳ್ಳಿ, ಎಸ್. ಸಿ ಕಾಲೋನಿಗಳಿರುವ ಮಲ್ಲಿದಿಣೆ, ತಡಕಲು,ಹೊಸೂರು ಗ್ರಾಮವನ್ನು ಸಂಪರ್ಕಿಸುತ್ತದೆ. ಈ ರಸ್ತೆಯನ್ನು ಪ್ರತಿನಿತ್ಯ ನೂರಾರು ಜನರು ಅವಲಂಬಿತರಾಗಿದ್ದಾರೆ.
ಮೂರು ಬಾರಿ ಶಾಸಕರಾದ ಹೆಚ್. ಕೆ ಕುಮಾರಸ್ವಾಮಿಯವರಿಗೂ ಹಾಗೂ ಕಳೆದ ಬರಿ ಸಂಸದರಾಗಿದ್ದ ಪ್ರಜ್ವಲ್ ರೇವಣ್ಣ ಅವರಿಗೂ ಸೇರಿದಂತೆ ಈಗಿರುವ ಹಾಲಿ ಶಾಸಕರಾದ ಸಿಮೆಂಟ್ ಮಂಜು ಅವರಿಗೆ ಗ್ರಾಮಸ್ಥರು ಅನೇಕ ಬಾರಿ ಮನವಿ ಪತ್ರವನ್ನು ಕೊಟ್ಟು ತಾಲ್ಲೂಕಿನ ಗಡಿ ಕಳಲೆ ಗ್ರಾಮದ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿಕೊಡಲಾಗಿತ್ತು. ಆದರು ಕೂಡ ಇದುವರೆಗೂ ಯಾವುದೇ ಜನ ಪ್ರತಿನಿಧಿಗಳು ಈ ಗ್ರಾಮಕ್ಕೆ ರಸ್ತೆಯನ್ನು ಮಾಡಿ ಕೊಡುವ ಮನಸ್ಸು ಮಾಡಿಲ್ಲ. ಕಳೆದ 3ಬಾರಿ ಶಾಸಕರಾಗಿದ್ದ ಹೆಚ್. ಕೆ ಕುಮಾರ ಸ್ವಾಮಿ ಅವರ ಹಾದಿಯನ್ನು ನೂತನ ಶಾಸಕರು ಹಿಡಿಯಬಾರದು ಎಂದು ಕಳಲೆ ಗ್ರಾಮಸ್ಥರಾ
ದ ಪ್ರೇಮ್ ಕುಮಾರ್ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಗ್ರಾಮದ ರಸ್ತೆ ಅಭಿವೃದ್ಧಿಗಾಗಿ ಹೊಸೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ವೀಣಾ ಅವರು ವರ್ಷಕ್ಕೆ ಕೇವಲ 100 ಮೀಟರ್ ರಸ್ತೆ ಮಾಡಿಕೊಟ್ಟಿದ್ದರು ಕೂಡ ಇಂದು ಗ್ರಾಮಸ್ಥರಿಗೆ ಅನುಕೂಲವಾಗುತ್ತಿತ್ತು. ಆದರೂ ಕೂಡ ಇದರ ಬಗ್ಗೆ ಗ್ರಾಮಪಂಚಾಯಿತಿ ಅಭಿವೃದ್ಧಿಯ ಅಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ್ ಅವರು ಕೂಡ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಇದುವರೆಗೂ ಸ್ಥಳಕ್ಕೆ ಭೇಟಿ ನೀಡುವ ಸೌಜನ್ಯತೆ ಮೆರೆದಿಲ್ಲ . ಶಾಸಕರಾದ ಸಿಮೆಂಟ್ ಮಂಜು ಅವರು ಈ ಗಡಿ ಭಾಗದ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಮನಸ್ಸು ಮಾಡಿದರೆ ಈ ಗ್ರಾಮಗಳು ಅಭಿವೃದ್ಧಿ ಕಾಣುತ್ತವೆ ಎಂಬುವುದು ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ಶಿವಕುಮಾರ್ ತಡಕಲು ಅಭಿಪ್ರಾಯಪಟ್ಟಿದ್ದಾರೆ.
ಆದಷ್ಟು ಬೇಗ ಗ್ರಾಮಕ್ಕೆ 250 ಮೀಟರ್ ರಸ್ತೆಯನ್ನು ಮಾಡಿಕೊಡದಿದ್ದರೆ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕಾರ ಮಾಡಲಾಗುವುದು ಎಂದು ಗ್ರಾಮಸ್ಥರು ತಮ್ಮ ಬಹುದಿನದ ನೋವನ್ನು ಆಕ್ರೋಶ ಮೂಲಕ ಹೊರಹಕಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಉದಯಕುಮಾರ್, ರೂಪೇಶ್, ರಂಜಿತ್, ಮುಗಣ್ಣಗೌಡ, ಉಮೇಶ್, ಜಿತೇಂದ್ರ, ನಯನ, ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.


