ಹಳ್ಳಿ ಮಣ್ಣಿನ ಸುವಾಸನೆ ಹೊತ್ತ ‘ವಲವಾರ’ – ಮಲೆನಾಡಿನ ಬದುಕಿಗೆ ಬೆಳ್ಳಿ ಪರದೆ ಸಾಟಿ.
(ಮಲೆನಾಡಿನ ಹಳ್ಳಿ ಮಗನ ಕನಸಿನ ಸಿನಿಮಾ ‘ವಲವಾರ’ – ಸ್ಥಳೀಯ ಪ್ರತಿಭೆಗೆ ನಿಮ್ಮ ಬೆಂಬಲ ಅಗತ್ಯ.)
ಸಕಲೇಶಪುರ:ಕಂಟೆಂಟ್ ಆಧಾರಿತ ಸಿನಿಮಾಗಳ ಸಾಲಿಗೆ ಹೊಸ ಸೇರ್ಪಡೆಯಾಗಿ ತೆರೆಕಂಡಿರುವ ‘ವಲವಾರ’ ಚಿತ್ರ, ತನ್ನ ಸರಳ,ಆದರೆ ಹೃದಯ ತಟ್ಟುವ ಕಥೆ ಹಾಗೂ ಮಲೆನಾಡಿನ ನೈಜ ಬದುಕಿನ ನಿರೂಪಣೆಯಿಂದ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
ಪಶ್ಚಿಮ ಘಟ್ಟಗಳ ಹಸಿರು ಮಡಿಲಲ್ಲಿ ಒಂದೇ ದಿನ ನಡೆಯುವ ಘಟನೆಗಳ ಸುತ್ತ ಸಾಗುವ ಈ ಕಥೆಯಲ್ಲಿ ಹಳ್ಳಿ ಬದುಕಿನ ಆತ್ಮೀಯತೆ ಮತ್ತು ಸಂಬಂಧಗಳ ಸೂಕ್ಷ್ಮತೆಯನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ.
‘ಮಾರ್ಫ್ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ ಸುತನ್ ಗೌಡ ಅವರು ಕಥೆ–ಚಿತ್ರಕಥೆ–ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಯಾವುದೇ ಅತಿರಂಜನೆ ಇಲ್ಲದೆ ಬದುಕಿನ ಸಹಜ ಸ್ಪಂದನವನ್ನು ಹಿಡಿದುಕೊಡುವ ಪ್ರಯತ್ನ ಚಿತ್ರಕ್ಕೆ ಶಕ್ತಿ ತುಂಬಿದೆ. ಕಥೆಯಲ್ಲಿ ಗೌರಿ ಎಂಬ ಹಸು ಹಾಗೂ ಜಡೇಜಾ ಎಂಬ ಹುಂಜವೂ ಕುಟುಂಬದ ಸದಸ್ಯರಂತೆ ಜೀವಂತ ಪಾತ್ರಗಳಾಗಿ ಮೂಡಿಬಂದಿದ್ದು ವಿಶೇಷ.
ವಿಶೇಷವೆಂದರೆ, ಸಕಲೇಶಪುರ ತಾಲ್ಲೂಕಿನ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೀರಿ ಚಿನ್ನಹಳ್ಳಿ ಗ್ರಾಮದ ಹಳ್ಳಿ ಮಗನೊಬ್ಬ ನಿರ್ದೇಶನ ಮಾಡಿದ ಸಿನಿಮಾ ರಾಜ್ಯಾದ್ಯಂತ ತೆರೆಕಾಣುತ್ತಿರುವುದು, ಇದು ಸ್ಥಳೀಯ ಪ್ರತಿಭೆಗೆ ದೊರೆತ ದೊಡ್ಡ ಗೌರವವಾಗಿದೆ. ಹಳ್ಳಿಯಿಂದಲೂ ಗುಣಮಟ್ಟದ ಹಾಗೂ ಅರ್ಥಪೂರ್ಣ ಚಿತ್ರಗಳನ್ನು ನಿರ್ಮಿಸಬಹುದು ಎಂಬುದಕ್ಕೆ ‘ವಲವಾರ’ ಸ್ಪಷ್ಟ ಸಾಕ್ಷಿಯಾಗಿದೆ.
ಮಲೆನಾಡಿನ ಮಣ್ಣಿನ ವಾಸನೆ ಮತ್ತು ಹಳ್ಳಿಯ ಹೃದಯವನ್ನು ಅನುಭವಿಸಬೇಕೆಂದಿರುವ ಸಿನಿ ಪ್ರೇಕ್ಷಕರು ಸಕಲೇಶಪುರ ತಾಲ್ಲೂಕಿನ ತೇಜಸ್ಸಿ ಚಿತ್ರಮಂದಿರದಲ್ಲಿ ಸಂಜೆ 4.30 ಹಾಗೂ 7.30ಕ್ಕೆ ಪ್ರದರ್ಶನಗೊಳ್ಳುತ್ತಿರುವ ‘ವಲವಾರ’ ಚಿತ್ರವನ್ನು ವೀಕ್ಷಿಸಿ ಸ್ಥಳೀಯ ಪ್ರತಿಭೆಯನ್ನು ಪ್ರೋತ್ಸಾಹಿಸುವಂತೆ ಗ್ರಾಮಸ್ಥರು ಹಾಗೂ ಸ್ನೇಹಿತರಾದ ಚಿನ್ನಹಳ್ಳಿಯ ಗಿರೀಶ್ ಮನವಿ ಮಾಡಿದ್ದಾರೆ.
ಚಿತ್ರದ ಹೆಸರು : ವಲವಾರ
ಬ್ಯಾನರ್ : ಮಾರ್ಫ್ ಪ್ರೊಡಕ್ಷನ್ಸ್
ನಿರ್ಮಾಪಕರು : ಗಿರಿದರ್ ಜೆ
ಕಥೆ – ಚಿತ್ರಕಥೆ – ಸಂಭಾಷಣೆ – ನಿರ್ದೇಶನ : ಸುತನ್ ಗೌಡ
ಸಂಗೀತ : ಕದ್ರಿ ಮಣಿಕಾಂತ್
ಸಾಹಿತ್ಯ : ಪ್ರಮೋದ್ ಮರವಂತೆ
ಛಾಯಾಗ್ರಹಣ : ಬಾಲರಾಜ್ ಗೌಡ
ಸಂಕಲನ : ಶ್ರೀಕಾಂತ್ ಎಸ್.ಎಚ್
ಶಬ್ದ ವಿನ್ಯಾಸ : ವಿ.ಜಿ. ರಾಜನ್
ತಂತ್ರಜ್ಞಾನ : ಸಿಂಕ್ ಸೌಂಡ್
ತಾರಾಗಣ : ಮಾಸ್ಟರ್ ವೇದಿಕ್ ಕೌಶಲ್, ಮಾಸ್ಟರ್ ಶಯನ್, ಹರ್ಷಿತಾ ಗೌಡ, ಮಾಲತೇಶ್ ಎಚ್.ವಿ, ಅಭಯ್


