ಸಕಲೇಶಪುರ:-ಶಿಕ್ಷಕರ ವೃತ್ತಿಯ ಗೌರವ, ಶೈಕ್ಷಣಿಕ ಮೌಲ್ಯಗಳು ಹಾಗೂ ಸಂಘಟಿತ ಶ್ರಮದ ಪ್ರತೀಕವಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ ಸಕಲೇಶಪುರ ವತಿಯಿಂದ 2026ನೇ ಸಾಲಿನ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಪುಷ್ಪ ಅವರು ನೂತನ ಕ್ಯಾಲೆಂಡರ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿಕ್ಷಕರು ಕೇವಲ ಪಾಠ ಹೇಳುವವರಲ್ಲ; ಸಮಾಜ ನಿರ್ಮಾಣದ ಶಿಲ್ಪಿಗಳು. ಇಂತಹ ಕ್ಯಾಲೆಂಡರ್ಗಳು ಶಿಕ್ಷಕರ ವೃತ್ತಿ ಬದ್ಧತೆ, ಶೈಕ್ಷಣಿಕ ಜವಾಬ್ದಾರಿ ಹಾಗೂ ಸಂಘಟಿತ ಚಿಂತನೆಯ ಪ್ರತಿಫಲವಾಗಿವೆ ಎಂದು ತಿಳಿಸಿದರು. ಸರ್ಕಾರದ ಶೈಕ್ಷಣಿಕ ಯೋಜನೆಗಳು ಹಾಗೂ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಗಂಗಾಧರ್ ಅವರು ಮಾತನಾಡಿ, ಶಿಕ್ಷಕರ ಸಂಘಗಳು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಹೇಳಿದರು. ಕಚೇರಿ ವ್ಯವಸ್ಥಾಪಕರಾದ ದಿನೇಶ್, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಕುಶವಂತ್ ಅವರುಗಳು ಶಿಕ್ಷಕರ ಸೇವೆ ಹಾಗೂ ಶೈಕ್ಷಣಿಕ ಕ್ಷೇತ್ರದ ಬಲವರ್ಧನೆ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಸವರಾಜು ಟಿ,ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಗಳು ಹಾಗೂ ನೌಕರರ ಸಂಘದ ಖಜಾಂಚಿಗಳಾದ ದೊರೇಶ್ ಎಂ.ಎಸ್, ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರಾದ ಸತೀಶ್, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೀರ್ತಿ ಕುಮಾರ್, ಸಾವಿತ್ರಿ ಬಾಪುಲೆ ಸಂಘದ ಕಾರ್ಯದರ್ಶಿಗಳಾದ ಮಮತಾ ಡಿ, ಉಪಾಧ್ಯಕ್ಷರಾದ ಮಮತಾ ಹೆಚ್ ಜೆ, ಸಿಆರ್ಪಿ ಮಿತ್ರರಾದ ಲಕ್ಷ್ಮೀನಾರಾಯಣ್, ವಸಂತ್ ಕುಮಾರ್, ಕೃಷ್ಣಕುಮಾರ್, ಗೌಡೇಗೌಡರು, ಅರುಣ್ ಸೇರಿದಂತೆ ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರು ಹಾಗೂ ಕಚೇರಿ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

