ವರದಿ :ನಾಗೇಶ್ ಎಂ ಎಚ್ ಮಾಗೇರಿ.
ಹೆತ್ತೂರು ಹೋಬಳಿ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು – ಶಾಸಕ ಸಿಮೆಂಟ್ ಮಂಜು.
ಸಕಲೇಶಪುರ: ತಾಲ್ಲೂಕಿನ ಹೆತ್ತೂರು ಹೋಬಳಿ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಇಲ್ಲಿನ ಶ್ರೀರಾಮ ಬಡಾವಣೆಗೆ ತೆರಳುವ ರಸ್ತೆ ಹಲವು ವರ್ಷಗಳಿಂದ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ನೂತನ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಶಾಸಕನಾಗಿ ಕಳೆದ ಎರಡು ಮತ್ತು ಅರ್ಧ ವರ್ಷಗಳ ಅವಧಿಯಲ್ಲಿ ಈ ಹೋಬಳಿ ವ್ಯಾಪ್ತಿಯಲ್ಲಿ ಹಲವು ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ಕುಡಿಯುವ ನೀರು, ವಿದ್ಯುತ್ ಮತ್ತು ರಸ್ತೆಗಳಂತಹ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಲಭ್ಯವಾಗುವ ಅನುದಾನಕ್ಕೆ ಅನುಗುಣವಾಗಿ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಇನ್ನು ಕೆಲವೇ ದಿನಗಳಲ್ಲಿ ಈ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಕರಗೂರು–ಕರಗೂರು ಕೊಪ್ಪಲು–ಹಾಡ್ಯಾ–ಹೆತ್ತೂರು ರಸ್ತೆಯನ್ನು 3 ಕಿ.ಮೀ ಯಿಂದ 8 ಕಿ.ಮೀ ವರೆಗೆ ಸುಮಾರು ₹3.96 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಅಲ್ಲದೆ, ಕೆ.ಪಿ.ಎಸ್. ಶಾಲೆಗೆ ತೆರಳುವ ರಸ್ತೆಯನ್ನು ₹15 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗುವುದು ಎಂದು ಹೇಳಿದರು.
ಇದರೊಂದಿಗೆ ಹಾಡ್ಲಳ್ಳಿ–ತೊಡುಮನೆಹಾರೆಯವರಿಗಿನ 1.5 ಕಿ.ಮೀ ರಸ್ತೆ, ಹಡ್ಲಳ್ಳಿಯಿಂದ ಕಿರ್ಕಳ್ಳಿ ವರಗಿನ 5 ಮೀಟರ್ ಅಗಲದ ರಸ್ತೆ ಹಾಗೂ ರಾಗಿಪುರದ ಸುಮಾರು 400 ಮೀಟರ್ ರಸ್ತೆ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.
ಮತದಾರರು ನನಗೆ ನೀಡಿರುವ ಒಂದೊಂದು ಮತವೂ ಅತ್ಯಂತ ಮಹತ್ವದ್ದಾಗಿದೆ. ನನ್ನ ಅಧಿಕಾರ ಅವಧಿಯಲ್ಲಿ ಕಿಂಚಿತ್ತೂ ದುರ್ಬಳಕೆ ಮಾಡದೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಶಾಸಕ ಸಿಮೆಂಟ್ ಮಂಜು ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ್,ಗ್ರಾ.ಪಂ ಸದಸ್ಯರುಗಳಾದ ಡಿಲಾಕ್ಷ,ಉಮೇಶ್,ಮಂಜು, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳಾದ ನೇತ್ರಾ ಸುರೇಶ್, ಪ್ರತಾಪ್,ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವೇದಮೂರ್ತಿ,ಮುಖಂಡರಾದ ರಾಮಚಂದ್ರ, ಶಿವಣ್ಣ,ಪಿಡಿಓ ರಮೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು
previous post
next post
