ಆಲೂರು ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ದ್ವಿಪಥ ರಸ್ತೆ ಚತುಷ್ಪತ ರಸ್ತೆಯಾಗಿ ಪರಿವರ್ತನೆ:ಶಾಸಕ ಸಿಮೆಂಟ್ ಮಂಜು
ಆಲೂರು ಪಟ್ಟಣದ ಸೌಂದರ್ಯ ಹೆಚ್ಚಿಸುವುದೇ ನಮ್ಮ ಆದ್ಯ ಕರ್ತವ್ಯ:ಶಾಸಕ ಸಿಮೆಂಟ್ ಮಂಜು
ಆಲೂರು: ಆಲೂರು ತಾಲೂಕು ಕೇಂದ್ರವನ್ನು ಅಭಿವೃದ್ಧಿ ಮಾಡುವ ಮೂಲಕ ಜಿಲ್ಲೆಯಲ್ಲಿಯೇ ಮಾದರಿ ತಾಲೋಕಾಗಿ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದು ಹಂತ ಹಂತವಾಗಿ ಆಲೂರು ತಾಲೋಕು ಕೇಂದ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ತರಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಆಲೂರು ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ತಿಳಿಸಿದರು.
ಬೈರಾಪುರ ಸರ್ಕಲ್ ನಿಂದ ಆಲೂರು ಪಟ್ಟಣದ ವೀರಶೈವ ಕಲ್ಯಾಣ ಮಂಟಪದ ವರೆಗಿನ ಹಾಲಿ ಇರುವ ದ್ವಿಪಥ ರಸ್ತೆಯನ್ನು ಚತುಷ್ಪತ ರಸ್ತೆಯಾಗಿ ಪರಿವರ್ತಿಸಿ ನಿರ್ಮಿಸುವ ಸುಮಾರು 4 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಆಲೂರು ತಾಲೂಕು ಕೇಂದ್ರವು ಹಾಸನ ಜಿಲ್ಲಾ ಕೇಂದ್ರಕ್ಕೆ ಕೇವಲ 12 ಕಿಲೋಮೀಟರ್ ಅಂತರವಿದ್ದರೂ ಕೂಡ ಆಲೂರು ತಾಲೂಕು ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿಯನ್ನು ಕಾಣದೆ ಇರುವುದು ವಿಪರ್ಯಾಸವಾಗಿದೆ ಹಾಸನ ಜಿಲ್ಲೆಯ ಯಾವುದೇ ತಾಲೂಕು ಕೇಂದ್ರಗಳಿಗೆ ನಾವು ಪ್ರವೇಶ ಮಾಡಿದಂತ ಸಂದರ್ಭದಲ್ಲಿ ತಾಲೂಕಿನ ಸೌಂದರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ತಾಲೂಕು ಕೇಂದ್ರದಿಂದ 3-4 ಕಿಲೋಮೀಟರ್ ಇರುವಾಗಲೇ ಚತುಷ್ಪತ ರಸ್ತೆಗಳು ತಾಲೂಕು ಕೇಂದ್ರವನ್ನು ಸಂಪರ್ಕಿಸುತ್ತವೆ ಆದರೆ ನಾವು ಆಲೂರು ತಾಲೂಕಿಗೆ ಪ್ರವೇಶ ಮಾಡುವ ಸಂದರ್ಭದಲ್ಲಿ ಒಂದು ಹೋಬಳಿ ಕೇಂದ್ರಕ್ಕೆ ಬಂದ ಅನುಭವವಾಗುತ್ತಿದೆ.
ಆದುದರಿಂದ ಆಲೂರು ತಾಲೂಕು ಕೇಂದ್ರದ ಸೌಂದರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಈ ರಸ್ತೆಯಲ್ಲಿ ಹಲವಾರು ವಾಹನ ಅಪಘಾತಗಳಾಗಿ ಅನೇಕ ಜನ ತಮ್ಮ ಜೀವವನ್ನು ಕಳೆದುಕೊಂಡಿರುವ ಉದಾಹರಣೆಗಳಿವೆ ಆದುದರಿಂದ ಅಪಘಾತದ ಪ್ರಮಾಣವನ್ನು ತಪ್ಪಿಸುವ ನಿಟ್ಟಿನಲ್ಲಿ ಇಂದು ಸುಮಾರು 4 ಕೋಟಿ ವೆಚ್ಚದಲ್ಲಿ ಬೈರಾಪುರ ಸರ್ಕಲ್ ನಿಂದ ಆಲೂರು ಪಟ್ಟಣದ ವೀರಶೈವ ಕಲ್ಯಾಣ ಮಂಟಪದವರೆಗೆ ಈಗ ಹಾಲಿ ಇರುವ ರಸ್ತೆಯನ್ನು ಬಲಭಾಗದಲ್ಲಿ 3 ಮೀಟರ್ ಎಡಭಾಗದಲ್ಲಿ 3 ಮೀಟರ್ ಅಗಲೀಕರಣ ಮಾಡುವ ಮೂಲಕ ರಸ್ತೆಯ ಮಧ್ಯ ಭಾಗದಲ್ಲಿ ಡಿವೈಡರ್ ಳನ್ನು ಹಾಕಿ ಆ ಸ್ಥಳದಲ್ಲಿ ಹೂವಿನ ಗಿಡಗಳನ್ನು ಬೆಳೆಸಿ ಒಂದು ರೀತಿಯ ಗಾರ್ಡನ್ ರೀತಿ ರಸ್ತೆಯನ್ನು ನಿರ್ಮಾಣ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದ್ದು ಇನ್ನು ಎನ್ಹೆಚ್ 75 ರಿಂದ ಆಲೂರು ಪಟ್ಟಣಕ್ಕೆ ಪ್ರವೇಶಿಸುವ ಉಳಿಕೆ 650 ಮೀಟರ್ ರಸ್ತೆಯನ್ನು ಕೂಡ ಮುಂದಿನ ದಿನದಲ್ಲಿ ಚತುಷ್ಪತ ರಸ್ತೆಯಾಗಿ ಪರಿವರ್ತಿಸಲು ಮುಂದಿನ ದಿನಗಳಲ್ಲಿ ಅನುದಾನವನ್ನು ಮೀಸಲಿಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬೈರಾಪುರ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸಿ.ಡಿ ಅಶೋಕ,ಬೈರಾಪುರ ಗ್ರಾ.ಪಂ ಮಾಜಿ ಅಧ್ಯಕ್ಷ ವೀರಭದ್ರಸ್ವಾಮಿ, ಪಾ.ಪಂ ಮಾಜಿ ಉಪಾಧ್ಯಕ್ಷ ಶಿವಣ್ಣ,ಬಿಜೆಪಿ ಯುವ ಘಟಕದ ಅಧ್ಯಕ್ಷ ಸ್ನೇಹಜೀವಿ ಗಣೇಶ್, ಪ್ರಧಾನ ಕಾರ್ಯದರ್ಶಿ ಮಧುಕುಮಾರ್,ಗ್ರಾಪಂ ಮಾಜಿ ಸದಸ್ಯರುಗಳಾದ ಡಿ.ಎಸ್ ನಂಜುಂಡಪ್ಪ,ನಂಜೇಶ್, ಬಾಲಲೋಚನ, ಕೃಷ್ಣೆಗೌಡ,ಉದ್ಯಮಿ ಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು
