ಬೇಲೂರು: ತಾಲೂಕಿನ ಹಳೇಬೀಡು ಹೋಬಳಿಯ ಸಾಣೇನಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಬಡ ರೈತ ಚನ್ನ ಬೀರೇಗೌಡ ಅವರಿಗೆ ಸೇರಿದ ಜೀವನಕ್ಕಾಗಿ ನಡೆಸಿಕೊಂಡು ಹೋಗುತ್ತಿದ್ದ
ಎರಡು ಸಿಂಧಿ ಹಸುಗಳು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಇತ್ತೀಚಿನ ಮಳೆಗಾಲದ ಅಬ್ಬರದ ನಡುವೆ ಸಂಭವಿಸಿದ ಈ ಘಟನೆ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.
ಮಳೆಯೊಂದಿಗೆ ಗುಡುಗು-ಸಿಡಿಲು ತೀವ್ರಗೊಂಡ ಸಂದರ್ಭ, ಹೊಲದ ಬಳಿ ಕಟ್ಟಿಹಾಕಲಾಗಿದ್ದ ಹಸುಗಳ ಮೇಲೆ ಸಿಡಿಲು ಬಡಿದ ಪರಿಣಾಮ ಅವು ಸ್ಥಳದಲ್ಲಿಯೇ ಮೃತಪಟ್ಟಿವೆ ಎಂದು ತಿಳಿದುಬಂದಿದೆ. ಹೈನುಗಾರಿಕೆಯನ್ನೇ ಜೀವನೋಪಾಯವಾಗಿ ಅವಲಂಬಿಸಿಕೊಂಡಿದ್ದ ರೈತನ ಕುಟುಂಬಕ್ಕೆ ಈ ಘಟನೆ ಭಾರೀ ಆರ್ಥಿಕ ಹೊಡೆತ ನೀಡಿದೆ. ಹಸುಗಳೇ ಆ ಕುಟುಂಬದ ಮುಖ್ಯ ಆದಾಯ ಮೂಲವಾಗಿದ್ದರಿಂದ, ಅವರ ಜೀವನಕ್ಕೆ ತೀವ್ರ ಸಂಕಷ್ಟ ಎದುರಾಗಿದೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಕಂದಾಯ ಇಲಾಖೆಯ ನಿರೀಕ್ಷಕರು (RI) ಹಾಗೂ ಗ್ರಾಮ ಲೆಕ್ಕಿಗರು (VA) ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಪಶುವೈದ್ಯರು ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿ ವೈದ್ಯಕೀಯ ವರದಿ ನೀಡಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಸಿಡಿಲಿನ ಪ್ರಭಾವವೇ ಹಸುಗಳ ಸಾವಿಗೆ ಕಾರಣವೆಂದು ದೃಢಪಡಿಸಲಾಗಿದೆ.
ಗ್ರಾಮಸ್ಥರು ಕೂಡಲೇ ಸ್ಥಳಕ್ಕೆ ಆಗಮಿಸಿ ರೈತನಿಗೆ ಸಾಂತ್ವನ ಹೇಳಿದ್ದಾರೆ. “ಇಂತಹ ಅಪ್ರತೀಕ್ಷಿತ ಪ್ರಕೃತಿ ವಿಕೋಪದಿಂದ ಬಡ ಕುಟುಂಬಗಳು ಸಂಪೂರ್ಣವಾಗಿ ಕುಸಿದು ಹೋಗುವ ಪರಿಸ್ಥಿತಿ ಉಂಟಾಗುತ್ತದೆ. ಸರ್ಕಾರ ಇಂತಹ ಸಂದರ್ಭದಲ್ಲಿ ತಕ್ಷಣ ಸ್ಪಂದಿಸಿ ಪರಿಹಾರ ನೀಡಬೇಕು” ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ, ಪಶುಸಂಗೋಪನಾ ಇಲಾಖೆ ಹಾಗೂ ಕಂದಾಯ ಇಲಾಖೆ ಸೇರಿ ಸರ್ಕಾರದ ನಿಯಮಾನುಸಾರ ತಕ್ಷಣ ಪರಿಹಾರ ಮಂಜೂರು ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅಲ್ಲದೆ, ಮಳೆಗಾಲದಲ್ಲಿ ಸಿಡಿಲು ಅಪಾಯ ಹೆಚ್ಚಾಗುತ್ತಿರುವುದರಿಂದ, ಗ್ರಾಮೀಣ ಭಾಗಗಳಲ್ಲಿ ಜಾಗೃತಿ ಮೂಡಿಸುವುದು ಹಾಗೂ ಪಶುಗಳ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೂಡ ಒತ್ತಾಯಿಸಲಾಗಿದೆ.
