26ರಂದು ಕೆಂಚಾಂಬ ಚಿಕ್ಕ ಜಾತ್ರಾ ಮಹೋತ್ಸವ
ಹಾಸನಾಂಬೆ ಸಹೋದರಿ ಸಪ್ತ ಮಾತೃಕೆಯರಲ್ಲಿ ಒಬ್ಬಳಾದ ಕೆಂಚಾಂಬ ದೇವಿ
ಆಲೂರು.ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇಗುಲದ ಬಾಗಿಲು ಮುಚ್ಚಿದ ಎರಡು ದಿನಗಳ ನಂತರ ಆಕೆಯ ಸಹೋದರಿ ಸಪ್ತ ಮಾತೃಕೆಯರಲ್ಲಿ ಒಬ್ಬಳಾದ ಕೆಂಚಾಂಬ ದೇವಿಯ ಚಿಕ್ಕ ಜಾತ್ರಾ ಮಹೋತ್ಸವ ಅ.26ರಂದು ಜರುಗಲಿದೆ ಎಂದು ಕೆಂಚಾಂಬ ದೇವಸ್ಥಾನದ ಅನ್ನ ದಾಸೋಹ ಸಮಿತಿ ಅಧ್ಯಕ್ಷ ಹಾಗೂ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಎಚ್.ಡಿ ಗೋಪಾಲ್ (ರಘು ಹರಿಹಳ್ಳಿ) ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಧಾರ್ಮಿಕ ಪ್ರತೀತಿಯಂತೆ ಹಿಂದಿನಿಂದಲೂ ಚಿಕ್ಕ ಜಾತ್ರಾ ಮಹೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ. ಆ.25ರ ಶನಿವಾರ ಸುಗ್ಗಿ ಕೈಂಕರ್ಯ ಜರುಗಲಿವೆ. ಶಾಸಕ ಸಿಮೆಂಟ್ ಮಂಜು ಹಾಗೂ ತಹಶೀಲ್ದಾರ್ ಎಚ್. ಮಲ್ಲಿಕಾರ್ಜುನ್ ಹಾಗೂ 48 ಹಳ್ಳಿಗಳ ಜನರು ಪಾಲ್ಗೊಳ್ಳುತ್ತಾರೆ. ಕೆಂಡಹಾಯುವುದು ಈ ಜಾತ್ರೆಯ ವಿಶೇಷತೆಯಾಗಿದೆ. ಮೂಲ ದೇವಸ್ಥಾನ ಹರಿಹಳ್ಳಿಯಲ್ಲಿ ದೇವಿಯ ದರ್ಶನಕ್ಕೆ ಶನಿವಾರ ಸಂಜೆ 8.30 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಅವಕಾಶವಿರುತ್ತದೆ. ದೇವಿಯ 7 ಮುಖಗಳನ್ನು ಸಿಂಗಾರಗೊಳಿಸಿ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಇದನ್ನು ಸಪ್ತಮಾತೃಕೆಯರ ಅಲಂಕಾರ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಸಪ್ತಮಾತೃಕೆಯರಿಗೆ ಅಭಿಷೇಕ, ಪೂಜೆ, ಮಹಾಮಂಗಳಾರತಿ, ಸುಗ್ಗಿ, ಉದ್ಘಾರ್ಚನೆ
ನೆರವೇರಲಿದೆ. ಮರು ದಿವಸ ಅಂದರೆ ಭಾನುವಾರ ಬೆಳಗ್ಗೆ 8.30ಕ್ಕೆ ವಾದ್ಯಗೋಷ್ಠಿ ಸಮೇತ ಉತ್ಸವ ಮೂರ್ತಿಯು ಹೊರಡುತ್ತದೆ. ಪ್ರತಿ ಮನೆಯವರು ಉತ್ಸವ ಮೂರ್ತಿಗೆ ಆರತಿ ಬೆಳಗಿ ಈಡುಗಾಯಿ ಹಾಕುವ ಮೂಲಕ ದೇವರನ್ನು ಸ್ವಾಗತಿಸುತ್ತಾರೆ. ಉತ್ಸವಮೂರ್ತಿಯು ವಾಪಸ್ಸು ಜಾತ್ರಾ ಮೈದಾನಕ್ಕೆ ತಲುಪಿ ಮಧ್ಯಾಹ್ನ 1.30 ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ. ನಂತರ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶವಿರುತ್ತದೆ.
ಮಧ್ಯಾಹ್ನ 2.30 ನಂತರ ಕೆಂಡ ಹಾಯುವ ವ್ಯವಸ್ಥೆ ಇರಲಿದೆ. ಹರಕೆ ಮಾಡಿಕೊಂಡ ಭಕ್ತರು ಕೆಂಡ ಹಾಯಬಹುದಾಗಿದೆ. ನಂತರ ಪ್ರಸಾದ
ವಿನಿಯೋಗ ಇರಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು.
ಅ.27ರಿಂದ ನ.1 ರವರೆಗೆ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ. ನ. 2ರ ಭಾನುವಾರ ಬಾಗಿಲು ತೆರೆಯುವ ಜಾತ್ರೆ, ಪುಣ್ಯಾಹ, ಸ್ವಸ್ತಿವಾಚನ ಪೂರ್ವಕವಾಗಿ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಕೆಂಚಾಂಬ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ನಾರಾಯಣ ಶರ್ಮ, ಸಿದ್ದಬಸವೇಗೌಡ, ಆರ್ಚಕರ ಕುಟುಂಬದ ಸತ್ಯನಾರಾಯಣ, ಗ್ರಾ.ಪಂ. ಸದಸ್ಯ ಚಂದ್ರಶೇಖರ್, ಹಾಡ್ಯ ಶಿವಶಂಕರ್, ಲೋಕೇಶ್, ರಾಜೇಶ್, ಮಂಜುನಾಥ್, ಷಣ್ಣುಖ ಉಪಸ್ಥಿತರಿದ್ದರು.
ಆಲೂರು ತಾಲೂಕಿನ ಕೆಂಚಾಂಬ ದೇವಿಯ ಚಿಕ್ಕ ಜಾತ್ರಾ ಮಹೋತ್ಸವದ ಪತ್ರಿಕಾಗೋಷ್ಠಿ ನಡೆಯಿತು.
previous post
next post
