ಆಲೂರು: ನಿರಂತರ ರಸ್ತೆ ಅಪಘಾತಗಳು ಉಂಟಾಗುತ್ತಿರುವ ಬಾಳ್ಳುಪೇಟೆಯ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 1.24 ಕಿ.ಮೀ. ಉದ್ದ ಸರ್ವೀಸ್ ರಸ್ತೆ ಶೀಘ್ರದಲ್ಲಿ ಕಾಮಗಾರಿ ಶುರುವಾಗಲಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಎನ್ಎಚ್ಎ ಬೆಂಗಳೂರು–ಮಂಗಳೂರು ಚತುಷ್ಪಥದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕರೊಂದಿಗೆ ಸೋಮವಾರ ಆಲೂರಿನಿಂದ ಮಾರನಹಳ್ಳಿ ವರೆಗೆ ಹೆದ್ದಾರಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಾಳ್ಳುಪೇಟೆ–ಜೆಪಿ ನಗರ ನಡುವೆ ಒಂದು ವರ್ಷದಲ್ಲಿ ಹಲವು ರಸ್ತೆ ಅಪಘಾತಗಳು ಸಂಭವಿಸಿ ಜೀವ ಹಾನಿ ಆಗಿದೆ. ಈ ವ್ಯಾಪ್ರಿಯಲ್ಲಿ ಬ್ಲಾಸಮ್, ಸಿದ್ದಣ್ಣಯ್ಯ ಹಾಗೂ ವಿವೇಕಾ ಕಾನ್ವೆಂಟ್ ಮೂರು ಶಾಲೆಗಳು ಇವೆ. ಮಕ್ಕಳು ಮಾತ್ರವಲ್ಲ ಎಲ್ಲರೂ ಅಪಾಯದಲ್ಲಿ ನಡೆದು ಹೋಗಬೇಕಾಗಿರುವುದರಿಂದ ಅಲ್ಲಿಗೆ ಒಂದು ಸರ್ವೀಸ್ ರಸ್ತೆ ಬೇಕು ಎಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಗರಿಯವರಿಗೆ ಮನವಿ ಪತ್ರ ನೀಡಲಾಗಿತ್ತು, ಈ ಕಾಮಗಾರಿ ಅನುಮೋದನೆಗೊಂಡು ಟೆಂಡರ್ ಸಹ ಆಗಿದ್ದು ಕಾಮಗಾರಿ ಶುರುವಾಗುತ್ತದೆ. ಶಾಲೆಗಳಿರುವ ಇದೇ ಪ್ರದೇಶದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಸ್ಕೈ ವಾಕ್ ನಿರ್ಮಾಣ ಮಾಡುವಂತೆಯೂ ಸಹ ಮನವಿ ಸಲ್ಲಿಸಲಾಗಿದೆ ಎಂದರು.
ಮಳಲಿ, ಕೌಡಹಳ್ಳಿ ಸಂಪರ್ಕ ಕಲ್ಪಿಸುವ ಜಾಗಗಳಲ್ಲಿಯೂ ಅಪಘಾತಗಳು ಸಂಭವಿಸುತ್ತಿವೆ. ಈ ಎರಡೂ ಕಡೆ ಪ್ಲೇ ಓವರ್ ನಿರ್ಮಾಣ ಮಾಡುವಂತೆ ಈ ಹಿಂದೆಯೇ ಮನವಿ ಸಲ್ಲಿಸಲಾಗಿದ್ದು, ಈ ಬಗ್ಗೆ ಎನ್ಎಚ್ಎಐ ಅಧಿಕಾರಿಗಳು ಸಹ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಎರಡು ಕಡೆ ಪ್ಲ ಓವರ್ ಅತ್ಯಗತ್ಯವಾಗಿದೆ ಎಂದರು.
ಕೆಂಪೇಗೌಡ ಪ್ರತಿಮೆ ವೃತ್ತದಲ್ಲಿ ಹೆದ್ದಾರಿಯಿಂದ ಪಟ್ಟಣದ ಕಡೆಗೆ, ಪಟ್ಟಣದ ಕಡೆಯಿಂದ ಹೆದ್ದಾರಿಗೆ ಹೋಗಲು ಸರಿಯಾದ ರಕ್ಷಣೆ ಇಲ್ಲ. ಜೀವ ಕೈಯಲ್ಲಿಟ್ಟುಕೊಂಡು ಹೆದ್ದಾರಿ ದಾಟಬೇಕಾಗಿದೆ. ಈ ಒಂದು ವೃತ್ತದಲ್ಲಿಯೂ ಸಹ ರಸ್ತೆ ಅಪಘಾತ ತಪ್ಪಿಸಲು ಪ್ಲೇ ಓವರ್ ಮಾಡಬೇಕು ಎಂದು ಎನ್ಎಚ್ಎಐ ಯೋಜನಾ ನಿರ್ದೇಶಕರಿಗೆ ಸ್ಥಳದಲ್ಲಿಯೇ ನಿಂತು ಸಮಸ್ಯೆ ವಿವರಿಸಲಾಗಿದೆ ಎಂದರು.
ದೋಣಿಗಾಲ್ನಲ್ಲಿ ಹಾಲಿ ರಸ್ತೆ ಸಂಪೂರ್ಣ ಗುಂಡಿಬಿದ್ದು ವಾಹನಗಳ ಸಂಚಾರಕ್ಕೆ ಭಾರೀ ಸಮಸ್ಯೆ ಆಗುತ್ತಿದ್ದು, ಕೂಲೇ ಗುಂಡಿ ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕ ಸೈಯದ್ ಅಮಾನುಲ್ಲಾ, ಡಿವೈಎಸ್ಪಿ ಮಹಂತೇಶ್, ಎಆರ್ಟಿಓ ಸರಸ್ವತಿ, ಪೊಲೀಸ್ ಇನ್ಸ್ಪೆಕ್ಟರ್ ವನರಾಜು ಇದ್ದರು.
ಚೌಲ್ಗೆರೆ ಸುಂಕ ವಸೂಲಾತಿ ಕೇಂದ್ರ ಅವ್ಯವಸ್ಥೆ ಶಾಸಕ ಗರಂ :
ಕ್ರಿಸ್ಮಸ್, ಹೊಸ ವರ್ಷ ಹಾಗೂ ವೀಕ್ ಎಂಡ್ ಹಿನ್ನಲೆ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ಸಂಚಾರಿಸುತ್ತಿದ್ದು ಟೋಲ್ ನಲ್ಲಿ ಸರಿಯಾಗಿ ವ್ಯವಸ್ಥೆ ಇಲ್ಲದೆ ಟೋಲ್ ನಲ್ಲೆ ನೂರಾರು ವಾಹನ ನಿಮಿಷಗಳಷ್ಟು ಕಾಯುವ ಪರಿಸ್ಥಿತಿ ಇದೆ. ಹೆದ್ದಾರಿಯಲ್ಲಿ ಸಂಭವಿಸುವ ಅಪಘಾತದ ಸಂದರ್ಭದಲ್ಲಿ ಸುಂಕ ವಸೂಲಾತಿ ಕೇಂದ್ರದಿಂದ ಆಂಬುಲೆನ್ಸ್, ಕ್ರೇನ್ ಸರ್ವಿಸ್ ಜನರಿಗೆ ಉಪಯೋಗವಾಗದೆ ಇರುವುದನ್ನು ಕಂಡು ಟೋಲ್ ಸಿಬ್ಬಂದಿಗಳ ಅಸಮಾಧಾನ ಹೊರ ಹಾಕಿದರು. ದಿನದ 24 ಗಂಟೆಯೂ ವಾಹನ ಸವಾರರಿಗೆ ಸೂಕ್ತ ಸೌಲಭ್ಯ ಒದಗಿಸುವಂತೆ ಟೋಲ್ ಸಿಬ್ಬಂದಿಗಳಿಗೆ ಶಾಸಕರು ಸೂಚಿಸಿದರು.



