ವರದಿ :ನವೀನ್ ಬೈರಾ ಪುರ
ಆಲೂರು: ಬೈಕ್ ಮತ್ತು ಕಾರಿನ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಾಳಿಗಹಳ್ಳಿ ಗ್ರಾಮದ ಬಳಿ ಶನಿವಾರ ರಾತ್ರಿ ಸಂಭವಿಸಿದೆ.
ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಸಂಸೊಗೆ ಗ್ರಾಮದ ಹೇಮಂತ್(19) ಮೃತ ದುರ್ದೈವಿಯಾಗಿದ್ದಾನೆ.
ಘಟನೆ ವಿವರ: ಹೇಮಂತ್ ಶನಿವಾರ ರಾತ್ರಿ ಬೈಕ್ ನಲ್ಲಿ ಮಗ್ಗೆ ಗ್ರಾಮದಲ್ಲಿರುವ ಪೆಟ್ರೋಲ್ ಬಂಕಿಗೆ ಹೋಗಿ ಡೀಸೆಲ್ ತುಂಬಿಸಿಕೊಂಡು ಮಗ್ಗೆಯಿಂದ ಸಂಸೊಗೆ ಗ್ರಾಮಕ್ಕೆ ಹಿಂದಿರುಗಿ ಬರುತ್ತಿದ್ದ ವೇಳೆ ಚನ್ನಾಪುರದಿಂದ ಮಗ್ಗೆ ಕಡೆಗೆ ಚಲಿಸುತ್ತಿದ್ದ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಈ ದುರ್ಘಟನೆ ನಡೆದಿದೆ.
ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಢಿಕ್ಕಿ ರಭಸಕ್ಕೆ ಬೈಕ್ ಸವಾರ ಹೇಮಂತನ ಕೈ, ಕಾಲು, ತಲೆ ಸೇರಿದಂತೆ ಎದೆಗೆ ಭಾಗಕ್ಕೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಕ್ಷಣಾರ್ಧದಲ್ಲಿ ಹೇಮಂತ್ ಮೃತಪಟ್ಟಿದ್ದಾನೆ. ಸ್ಥಳೀಯರು ಆಲೂರು ಪೊಲೀಸ್ ಠಾಣೆಗೆ ವಿಷಯ ತಿಳಿಸಿದ ಕೂಡಲೇ ಪೊಲೀಸರು ಸ್ಥಳಕ್ಕಾಗಿಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
