ಅಬ್ಬನ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಚಂದ್ರಶೆಟ್ಟಿ ಅವಿರೋಧ ಆಯ್ಕೆ.
ಆಲೂರು : ತಾಲೂಕಿನ ಅಬ್ಬನ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಬ್ಬಿನಹಳ್ಳಿ ಜಗದೀಶ್ ತಂಡದ ಬೆಂಬಲಿತ ನಿರ್ದೇಶಕ ಚಂದ್ರಶೆಟ್ಟಿ, ಉಪಾಧ್ಯಕ್ಷರಾಗಿ ಗುರುಪಾದಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಬ್ಬನ ಗ್ರಾಮದಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಚಂದ್ರ ಶೆಟ್ಟಿ ಹಾಗೂ ಗುರುಪಾದಪ್ಪ ಇಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯು ಅವರ ಅವಿರೋಧ ಆಯ್ಕೆ ಪ್ರಕಟಿಸಿದರು.ನಂತರ ನೂತನ ಅಧ್ಯಕ್ಷರು ಮಾತನಾಡಿ, ಸಂಘದ ಎಲ್ಲ ನಿರ್ದೇಶಕರ ಸಹಕಾರದಿಂದ ನಾನೀಗ ಸಂಘದ ಅಧ್ಯಕ್ಷನಾಗಿದ್ದೇನೆ. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ರೈತರಿಗೆ ತಲುಪಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆಂದು ಹೇಳಿದರು.ಸಂಘದ ಆಡಳಿತ ಮಂಡಳಿಗೆ ನಿರ್ದೇಶಕರನ್ನು ಆಯ್ಕೆ ಮಾಡುವಾಗಲೂ ಎಲ್ಲರ ಸಹಕಾರದಿಂದ 11 ಮಂದಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು.ಇಂದೂ ಕೂಡ ಸಹಕಾರ ಸಂಘಕ್ಕೆ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.ಸಹಕಾರ ಸಂಘದಲ್ಲಿ ರಾಜಕೀಯ ನುಸುಳಬಾರೆಂಬ ಉದ್ದೇಶದೊಂದಿಗೆ ಸಹಕಾರ ಸಂಘದ ವ್ಯಾಪ್ತಿಗೆ ಸೇರಿದ ಗ್ರಾಮಗಳ ಗ್ರಾಮಸ್ಥರು ಒಟ್ಟಾಗಿ ಸೇರಿ ಮಾತುಕತೆ ಮೂಲಕ ಯಾವುದೇ ಗೊಂದಲಗಳಿಲ್ಲದೇ ಅವಿರೋಧವಾಗಿ ಆಯ್ಕೆ ಮಾಡಿದ್ದೇವೆ.ಹಾಗಾಗಿ ಅವಿರೋಧ ಆಯ್ಕೆಗೆ ಸಹಕಾರ ನೀಡಿದ ಗ್ರಾಮಸ್ಥರು ಹಾಗು ನಿರ್ದೇಶಕರುಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕಬ್ಬಿನಹಳ್ಳಿ ಜಗದೀಶ್ ರವರ ಮಾರ್ಗದರ್ಶನದಲ್ಲಿ ಸಂಘವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದರು.
ಹಾಸನ ಎಚ್.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್ ಮಾತನಾಡಿ,ನೂತವಾಗಿ ಆಯ್ಕೆಯಾಗಿರುವ ಅಧ್ಯಕ್ಷರು ತಮ್ಮ ಅಧಿಕಾರದ ಅವಧಿಯಲ್ಲಿ ಜಾತಿ, ಮತ, ಪಕ್ಷಭೇದ ಎಣಿಸದೆ ಸರ್ಕಾರದ ಯೋಜನೆಗಳು ಮತ್ತು ಸಾಲ ಸೌಲಭ್ಯಗಳು ರೈತರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದರೊಂದಿಗೆ, ಸಂಘದ ನೂತನ ಕಟ್ಟಡ ನಿರ್ಮಾಣ ಸೇರಿದಂತೆ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದರು.
ಇದೆ ವೇಳೆ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂಧರ್ಭದಲ್ಲಿ ಡಿಸಿಸಿ ನಿರ್ದೇಶಕ ಕೆ.ಎಸ್ ಮಂಜೇಗೌಡ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಸಂಘದ ನಿರ್ದೇಶಕರುಗಳಾದ ನಂಜಪ್ಪ, ವಿರೂಪಾಕ್ಷ, ವೇದಮೂರ್ತಿ (ಸಂಪತ್), ಯೋಗೇಶ್, ಕೋಮಲೇಶ್, ಮಣಿ, ಪೂಜಾ, ಶಿವಪ್ಪ ಮತ್ತು ವಿಶಾಲಾಕ್ಷಿ ಸೇರಿದಂತೆ ಮುಖಂಡರಾದ ನಟರಾಜ್, ನಿಂಗರಾಜು, ಸುರೇಶ್, ಮಾದಗೋಡು ಚೇತನ್ ಸೇರಿ ಮುಂತಾದವರು ಉಪಸ್ಥಿತರಿದ್ದರು.
