ಸಕಲೇಶಪುರದ ಬೆಟ್ಟದ ಭೈರವೇಶ್ವರ ದೇವಾಲಯದಲ್ಲಿ ಫೋಟೋ ಶೂಟ್ ಮಾಡಲು 4 ಗಂಟೆಗೆ ₹5,000 ಶುಲ್ಕವನ್ನು ಜಿಲ್ಲಾಡಳಿತ ಘೋಷಣೆ
ಈ ದೇವಸ್ಥಾನಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿ ಲತಾ ಕುಮಾರಿಯವರು ಹಲವಾರು ವಿಚಾರಗಳ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು.
ಬಳಿಕ ಹಾನುಬಾಳಿನ ರೆಸಾರ್ಟ್ ನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಹೋಂ ಸ್ಟೇ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು
ಫೋಟೋ ಶೂಟ್ ಮತ್ತು ದಂಡದ ವಿವರ ನೀಡಿದರು.
🔴ಶುಲ್ಕದ ವಿವರ :
4 ಗಂಟೆಯ ಫೋಟೋ ಶೂಟ್ಗೆ ರೂ 5,000. ನಿಗದಿತ ಸಮಯಕ್ಕಿಂತ ಹೆಚ್ಚಾದರೆ ಗಂಟೆಗೆ ರೂ 1,000 ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ.
ಫೋಟೋ ತೆಗೆಯುವವರು ಆನ್ಲೈನ್ ಮೂಲಕ ಮುಂಚಿತವಾಗಿ ಅನುಮತಿ ಪಡೆದು ಕ್ಯೂಆರ್ ಕೋಡ್ ಅಥವಾ ಫೋನ್ ಪೇ ಮೂಲಕ ಹಣ ಪಾವತಿ ಮಾಡಬೇಕು.
ಶಿಸ್ತಿನ ವಸ್ತ್ರಸಂಹಿತೆ
: ದೇವಸ್ಥಾನದ ಆವರಣದಲ್ಲಿ ವಸ್ತ್ರಸಂಹಿತೆ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾಗಿದೆ . ಈ ಕಾನೂನು ಉಲ್ಲಂಘಿಸುವವರಿಗೆ ರೂ 2,500 ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಅಭಿವೃದ್ಧಿ ಸಮಿತಿ
ಈ ದೇವಸ್ಥಾನದ ಸುಸ್ಥಿತಿಗಾಗಿ ಸುತ್ತಮುತ್ತಲಿನ 9 ಗ್ರಾಮಗಳ ತಲಾ ಒಬ್ಬೊಬ್ಬ ಸದಸ್ಯರನ್ನು ಒಳಗೊಂಡ ಸಮಿತಿ ರಚನೆ ಮಾಡುವಂತೆ ಸೂಚನೆ ನೀಡಿದ್ದಾರೆ.
ವಾಹನ ನಿಲುಗಡೆಗೆ ಅವಕಾಶ :
ದೇವಾಲಯಕ್ಕೆ ಬರುವ ಪ್ರವಾಸಿಗರಿಗಾಗಿ ವಾಹನ ನಿಲ್ಲಿಸಲು ದೇವಾಲದಕೆರೆ ಗ್ರಾಮ ಪಂಚಾಯಿತಿ ವತಿಯಿಂದ ಪಾರ್ಕಿಂಗ್ ಗೇಟ್ ನಿರ್ಮಾಣ ಮಾಡುವಂತೆ ತಿಳಿಸಿದ್ದಾರೆ .
ದ್ವಿಚಕ್ರ ವಾಹನ ಹೊರತುಪಡಿಸಿ ಉಳಿದ ವಾಹನಗಳಿಗೆ ಗಂಟೆಗೆ ರೂ 30 ಶುಲ್ಕ ವಿಧಿಸಲಾಗುವುದು .
ಇದರ ಜೊತೆಗೆ ಸೌರಶಕ್ತಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದ್ದಾರೆ
.
• ಟ್ರಕ್ಕಿಂಗ್ ಹೋಗುವವರು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ನಿಗದಿತ ಶುಲ್ಕ ಹಾಗೂ ನಿಯಮಗಳೊಂದಿಗೆ ಟ್ರಕ್ಕಿಂಗ್ ಪುನರಾರಂಭಕ್ಕೆ ಕ್ರಮ ಮಾಡುವಂತೆ ತಿಳಿಸಿದ್ದಾರೆ.
ಶಿರಾಡಿಘಾಟ್ ಸೇರಿದಂತೆ ಆಕರ್ಷಕ ಸ್ಥಳಗಳಲ್ಲಿ ವೀಕ್ಷಣಾ ಗೋಪುರ ನಿರ್ಮಿಸಲು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ
ವಿಶೇಷ ಸೂಚನೆ :
18 ವರ್ಷದ ಒಳಗಿನ ಹೆಣ್ಣು ಮಕ್ಕಳನ್ನು ಯಾರಾದರೂ ಕರೆತಂದಲ್ಲಿ ತಕ್ಷಣ ವಿಚಾರಿಸಿ ಪೊಲೀಸರಿಗೆ ಮಾಹಿತಿ ನೀಡಬೇಕು. ಹೋಂ ಸ್ಟೇ ಅಥವಾ ರೆಸಾರ್ಟ್ಗಳಲ್ಲಿ ಅಂತಹವರಿಗೆ ವಸತಿ ನೀಡಿದರೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಈ ಸಭೆಯಲ್ಲಿ ತಹಶೀಲ್ದಾರ್ ಕೆ.ಎಸ್. ಸುಪ್ರೀತಾ, ಡಿವೈಎಸ್ಪಿ ಎಸ್.ಕೆ. ಮಾಲತೀಶ್, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಹೋಂ ಸ್ಟೇ-ರೆಸಾರ್ಟ್ ಮಾಲೀಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
